ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಕಷ್ಟು ಪರಿಶ್ರಮ ಪಟ್ಟು ತಯಾರಿಸಿ ಕೊಟ್ಟಿರುವ ಸಂವಿಧಾನ ಹಾಗೂ ಈ ದೇಶದಲ್ಲಿ ತುಳಿತಕ್ಕೆ ಒಳಗಾಗಿರುವ ಜನರನ್ನು ಸಂರಕ್ಷಣೆ ಮಾಡಿಕೊಳ್ಳಬೇಕಾಗಿರುವ ಹೊಣೆಗಾರಿಕೆ ಸಂಘಟನೆಗಳ ಮೇಲಿದೆ ಎಂದು ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ. ಮೂರ್ತಿ ಹೇಳಿದರು.
ಇಲ್ಲಿನ ಬಸವನಕುಂಟೆ ಸಮುದಾಯಭವನದಲ್ಲಿ ಆಯೋಜಿಸಿದ್ದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ದಲಿತರನ್ನು ತುಳಿಯುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮನ್ನಾಳುತ್ತಿರುವ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಣೆಗೆ ಒಳಗಾಗಿರುವ ನಾವು, ಸಂವಿಧಾನ ಜಾರಿಗೆ ಬಂದ ನಂತರವಾದರೂ ನಾವು ಸಮಾಜದಲ್ಲಿ ಏಳಿಗೆಯಾಗುತ್ತವೆ ಎನ್ನುವ ಕನಸು ಕನಸಾಗಿಯೇ ಉಳಿದುಕೊಂಡಿದೆ’ ಎಂದರು.
ಅಂಬೇಡ್ಕರ್ ಸೇನೆ ನೂತನ ತಾಲ್ಲೂಕು ಅಧ್ಯಕ್ಷ ಎಂ. ವೇಣುಗೋಪಾಲ್ ಮಾತನಾಡಿ, ಸಂಘಟನೆಗಳು, ನಿಷ್ಠೆ, ಪ್ರಾಮಾಣಿಕವಾಗಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಈಚೆಗೆ ಸಂಘಟನೆಗಳ ಮೇಲಿದ್ದ ಗೌರವ ಭಾವನೆ ಜನರಲ್ಲಿ ಕಡಿಮೆಯಾಗುತ್ತಿದೆ. ಸಂಘಟನೆಗಳು ಎಂದರೆ ವಸೂಲಿಗಾಗಿಯೇ ಇರುವವರು ಎನ್ನುವ ತಪ್ಪು ಕಲ್ಪನೆಗಳು ಜನರಲ್ಲಿ ಬೇರೂರಿ ಬಿಟ್ಟಿವೆ ಎಂದರು.
ಸಂಘಟನೆಗೆ ಇರುವ ಶಕ್ತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಜನರನ್ನು ಸಂಘಟಿಸುವ ಮೂಲಕ ಸರ್ಕಾರಗಳಿಂದ ಅವರಿಗೆ ಬರುವಂತಹ ಸೌಲಭ್ಯಗಳ ಕುರಿತು ಅರಿವು ಮೂಡಿಸುವಂತಹ ಕೆಲಸವಾಗಬೇಕು ಎಂದರು.
ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಖಂಡರಾದ ನಟ ಸುನಾಮಿಕಿಟ್ಟಿ, ವಾಲೆ ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಾರಾಯಣಸ್ವಾಮಿ, ಕೋರಮಂಗಲ ವೆಂಕಟೇಶ್, ಗೊಲ್ಲಹಳ್ಳಿ ನರಸಿಂಹಮೂರ್ತಿ, ವಿಜಯಕುಮಾರ್, ಕೃಷ್ಣಮೂರ್ತಿ, ಸುರೇಶ್, ಮಂಜುನಾಥ್, ಇಲಿಯಾಜ್, ಹೊಸಹುಡ್ಯ ಮುನಿರಾಜು, ಚಿಕ್ಕೀರಪ್ಪ, ದೊಡ್ಡಸಾಗರಹಳ್ಳಿ ಬಾಬಾಜಾನ್, ಎಂ.ಡಿ. ಯೂಸೂಫ್, ಯಲಿಯೂರು ರವಿ, ಗೋಖರೆ ಮುನಿಕೃಷ್ಣಪ್ಪ, ನರಸಿಂಹಮೂರ್ತಿ, ಮೂರ್ತಿ, ಬಾನುಚಂದ್ರ, ಮುನೀಂದ್ರ, ದಿಲೀಪ್ಕುಮಾರ್, ಬಿಜ್ಜವಾರ ಜಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.