ADVERTISEMENT

ಕಾಂಗ್ರೆಸ್‌ ನಾಯಕರ ಸಂಭಾಷಣೆ ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:05 IST
Last Updated 7 ಡಿಸೆಂಬರ್ 2022, 5:05 IST

ದೇವನಹಳ್ಳಿ: ವಿಧಾನಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ವಿ. ಶಾಂತಕುಮಾರ್‌ ಹಾಗೂ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖಂಡ ಸಂದೀಪ್‌ ನಡುವೆ ನಡೆದಿದೆ ಎನ್ನಲಾದ ಮೊಬೈಲ್‌ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಶಾಂತಕುಮಾರ್ ವಿರುದ್ಧ ಫೋನ್‌ನಲ್ಲಿ ಅಪಮಾನ ಮಾಡುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದ ಎನ್ನುವ ವಿಚಾರಕ್ಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಕರೆ ಮಾಡಿದ ವೇಳೆ ಇಬ್ಬರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿರುವ ಆಡಿಯೊ ಇದಾಗಿದೆ. ಕಾಂಗ್ರೆಸ್‌ನಲ್ಲಿ ಒಳ ಜಗಳ ನಡೆಯುತ್ತಿದೆ ಎಂದು ರಾಜಕೀಯ ವಲಯದಲ್ಲಿ ಮಾತನಾಡುತ್ತಿದ್ದರೆ ಕೈ ನಾಯಕರ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಶಾಂತಕುಮಾರ್ ಪ್ರತಿಕ್ರಿಯಿಸಿ, ‘ನಮ್ಮ ವಿರುದ್ಧ ಪಿತೂರಿ ಮಾಡಿ ಆಡಿಯೊ ಹರಿಬಿಟ್ಟಿದ್ದಾರೆ. ಅದರಲ್ಲಿರುವ ಧ್ವನಿ ನಮ್ಮದಲ್ಲ. ಮಿಮಿಕ್ರಿ ಮಾಡಿ ಷಡ್ಯಂತ್ರ ರೂಪಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು’ ಎಂದರು.

ADVERTISEMENT

ಸಂದೀಪ್‌ ಮಾತನಾಡಿ, ‘ನಾವಿಬ್ಬರು ಚೆನ್ನಾಗಿದ್ದೇವೆ. ನಮ್ಮ ಪಕ್ಷ ಮುಂದೆ ಗೆಲ್ಲುತ್ತದೆ. ಈ ರೀತಿ ಪಕ್ಷದ ವರ್ಚಸ್ಸಿಗೆ ತೊಂದರೆ ನೀಡಲು ಆಡಿಯೊ ಹರಿಬಿಟ್ಟಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.