ADVERTISEMENT

ವಿಜಯಪುರ: ರೈತರ ಏಳಿಗೆಗೆ ಸಹಕಾರ ಬ್ಯಾಂಕ್‌ ಬದ್ಧ- ಜಿ.ಲಕ್ಷ್ಮೀನಾರಾಯಣಪ್ಪ

ರೇಷ್ಮೆ ಬೆಳೆಗಾರರ ಸಂಘದ ವಾರ್ಷಿಕ ಸಭೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:53 IST
Last Updated 29 ನವೆಂಬರ್ 2021, 4:53 IST
ದೇವನಹಳ್ಳಿ ತಾಲ್ಲೂಕು ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು
ದೇವನಹಳ್ಳಿ ತಾಲ್ಲೂಕು ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು   

ವಿಜಯಪುರ:‘ವಾಣಿಜ್ಯ ಬ್ಯಾಂಕ್‌ಗಳಂತೆ ಸಹಕಾರ ಬ್ಯಾಂಕ್‌ಗಳನ್ನು ಪರಿಗಣಿಸುವುದು ಸರಿಯಲ್ಲ. ಸಹಕಾರ ಬ್ಯಾಂಕ್‌ಗಳು ರೈತರ ಏಳಿಗೆಗೆ ಪ್ರಮುಖ ಪಾತ್ರವಹಿಸುತ್ತಿವೆ’ ಎಂದು ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ. ಲಕ್ಷ್ಮೀನಾರಾಯಣಪ್ಪ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2020-21ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಮೂಲಕ ಚಿನ್ನದ ಮೇಲೆ ₹ 6.5 ಕೋಟಿ ಸಾಲ, ಕೆಸಿಸಿ ₹ 5 ಕೋಟಿ, ಸ್ತ್ರೀಶಕ್ತಿ ಸಂಘಗಳಿಗೆ ₹ 2.5 ಕೋಟಿ, ಕೃಷಿಯೇತರ ₹ 5 ಕೋಟಿ ಸಾಲ ನೀಡಲಾಗಿದೆ. 100 ಸಂಘಗಳು ಸಹಕಾರ ಬ್ಯಾಂಕಿನಲ್ಲಿ ವ್ಯವಹರಿಸುತ್ತಿವೆ. ವಾರ್ಷಿಕವಾಗಿ ₹ 69 ಕೋಟಿಯಷ್ಟು ವ್ಯವಹರಿಸಲಾಗಿದೆ ಎಂದುವಿವರಿಸಿದರು.

ADVERTISEMENT

ಸಹಕಾರ ಬ್ಯಾಂಕ್‌ಗಳು ರೈತರು, ಕೂಲಿ ಕಾರ್ಮಿಕರು, ಇತರೆ ಬಡವರಿಗೆ ಹೆಚ್ಚಿನ ಸಾಲ ನೀಡಿ ಆರ್ಥಿಕ ಸಬಲತೆಗೆ ಕಾರಣವಾಗಿವೆ. ಆದ್ದರಿಂದ ಸಹಕಾರ ಬ್ಯಾಂಕ್‌ಗಳನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಬೇಕಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಿ ಸಬಲರನ್ನಾಗಿ ಮಾಡಲು ಈ ಬ್ಯಾಂಕ್‌ಗಳು ಸಹಕಾರಿಯಾಗಿದ್ದು, ಇವುಗಳ ಶ್ರೇಯೋಭಿವೃದ್ಧಿಗೆ ನೆರವಾಗಬೇಕಿದೆ ಎಂದರು.

ಸದಸ್ಯರು ಕೇವಲ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಗೂ ಮತದಾನಕ್ಕಾಗಿ ಮಾತ್ರ ಬಂದು ಸಹಿ ಹಾಕಿ ಹೋಗುವುದನ್ನು ಬಿಡಬೇಕು. ವರ್ಷಪೂರ್ತಿ ಆಯವ್ಯಯ ತಿಳಿದುಕೊಂಡು ನಮಗೆ ಏನು ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್‌ನ ವೃತ್ತಿಪರ ನಿರ್ದೇಶಕ ಕೆ. ರಮೇಶ್ ಮಾತನಾಡಿ, ನಲ್ಲೂರಿನ ಸಂಘ ಉತ್ತಮವಾಗಿ ನಡೆಯುತ್ತಿದೆ. ಇದರ ಲೆಕ್ಕಾಚಾರದ ಬಗ್ಗೆ ಜನರು ತಿಳಿದುಕೊಳ್ಳಬೇಕು. ರೈತರು ಪ್ರಶ್ನಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ದೇವನಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ರೈತರು ಬೆಳೆ ಸಾಲ ಪಡೆದುಕೊಳ್ಳಬಹುದು. ಇದರಿಂದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಸುಭ್ರಮಣಿ, ನಿರ್ದೇಶಕರಾದ ಎನ್.ಎಂ .ಆನಂದ್, ಲಲಿತೇಶ್, ವಿಶ್ವನಾಥ್, ಆರ್.ಎ. ಚಂದ್ರಪ್ಪ, ಯಶೋದ್‌ ರೆಡ್ಡಿ, ಕೃಷ್ಣಪ್ಪ, ಪಿಳ್ಳಪ್ಪ, ಕೆಂಪಯ್ಯ, ಗಾಯಿತ್ರಿ, ಭಾಗ್ಯಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಸಂಘದ ಮಾಜಿ ಅಧ್ಯಕ್ಷ ಕೆಂಪಣ್ಣ, ಮುನಿನಾರಾಯಣಪ್ಪ, ಕಾರ್ಯ ನಿರ್ವಹಣಾಧಿಕಾರಿ ವರದರಾಜು, ಲೆಕ್ಕಾಧಿಕಾರಿ ಸಂತೋಷ್, ಲೆಕ್ಕಿಗರಾದ ಮಹಾಲಕ್ಷ್ಮಿ, ಮಾರಾಟ ಗುಮಾಸ್ತ ನರಸಿಂಹಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.