ಆನೇಕಲ್:ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನಅಗ್ರಹಾರ ಸಮೀಪದ ನೀಲಗಿರಿ ತೋಪೊಂದರಲ್ಲಿ ಮಂಗಳವಾರ ರಾತ್ರಿ ಕುಡಿದ ಅಮಲಿನಲ್ಲಿ ಜೊತೆಯಲ್ಲಿದ್ದವರೇ ಇಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಒಬ್ಬನನ್ನು ಹೆಬ್ಬಗೋಡಿಯ ರವಿಕುಮಾರ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಿಲ್ಲ. ನೀಲಗಿರಿ ತೋಪಿನಲ್ಲಿ ಮದ್ಯದ ಪಾರ್ಟಿ ಮಾಡಿದ್ದರು. ಪಾರ್ಟಿಯ ನಂತರ ಗುಂಪಿನಲ್ಲಿದ್ದವರೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
‘ಕೊಲೆಯಾದ ಸ್ಥಳದಲ್ಲಿ ಮದ್ಯದ ಬಾಟಲ್ಗಳು ಬಿದ್ದಿರುವುದು ಕಂಡುಬಂದಿದೆ. ಬಾಟಲ್ಗಳನ್ನು ಮಾರಾಟ ಮಾಡಿರುವ ಬಾರ್ನವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದರು.
ಬುಧವಾರ ಬೆಳಿಗ್ಗೆ ಸ್ಥಳೀಯರು ನೀಲಗಿರಿ ತೋಪಿನತ್ತ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎರಡು ಶವಗಳನ್ನು ನೋಡಿ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕುಡಿದ ಅಮಲಿನಲ್ಲಿ ಜಗಳವಾಗಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ವಂಶಿಕೃಷ್ಣ, ಎಎಸ್ಪಿ ಲಕ್ಷ್ಮೀ ಗಣೇಶ್, ಡಿವೈಎಸ್ಪಿ ಎಂ. ಮಲ್ಲೇಶ್, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಗೌತಮ್, ಕೆ. ವಿಶ್ವನಾಥ್, ಎಚ್.ಆರ್. ಮಹಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.