ADVERTISEMENT

‘ಅಂಬೇಡ್ಕರ್ ನಿಲುವಿಗೆ ಮನ್ನಣೆ’

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 14:44 IST
Last Updated 14 ಆಗಸ್ಟ್ 2019, 14:44 IST

ದೇವನಹಳ್ಳಿ: ಜಮ್ಮು ಕಾಶ್ಮೀರಕ್ಕೆ ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ಕೇಂದ್ರ ಸರ್ಕಾರ ರದ್ದು ಪಡಿಸಿರುವ ಕ್ರಮ, ಡಾ. ಬಿ.ಆರ್. ಅಂಬೇಡ್ಕರ್ ನಿಲುವಿಗೆ ಮನ್ನಣೆ ನೀಡಿದಂತಾಗಿದೆ ಎಂದು ಭಾರತ ಜನಜಾಗೃತಿ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಮುನಿಯಪ್ಪ ಬಲವಾದಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರತೆ ಹಾಗೂ ಏಕತೆಯಿಂದ ಒಗ್ಗೂಡುವ ಬಲಿಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪ ಡಾ.ಬಿ.ಆರ್.ಅಂಬೇಡ್ಕರ್ ಅವರದಾಗಿತ್ತು. ಮುಸ್ಲಿಂ ಸಮುದಾಯವನ್ನು ಓಲೈಸಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಅಂದಿನ ಸರ್ಕಾರ ಅಂಬೇಡ್ಕರ್ ಅವರ ವಿರೋಧವನ್ನು ಲೆಕ್ಕಿಸದೆ ಸಂಸತ್ತಿನಲ್ಲಿ ಅಂಬೇಡ್ಕರ್ ಗೈರಾದ ಸಂದರ್ಭವನ್ನು ಸಮಯೋಚಿತವಾಗಿ ಬಳಸಿಕೊಂಡು 370 ಮತ್ತು 35ಎ ವಿಧಿಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಿತ್ತು ಎಂದು ದೂರಿದರು.

ಹಲವು ದಶಕಗಳ ನಂತರ ಎಚ್ಚೆತ್ತುಕೊಂಡ ಕೇಂದ್ರದ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಂಡಿರುವುದು ದೇಶವನ್ನು ರಾಜಕೀಯವಾಗಿ ಮತ್ತು ಪ್ರಾದೇಶಿಕವಾಗಿ ಒಗ್ಗೂಡಿಸಿದೆ. ಒಂದೇ ದೇಶದಲ್ಲಿ ಎರಡು ರೀತಿಯ ಕಾನೂನು, ಎರಡು ರೀತಿಯ ಧ್ವಜಾರೋಹಣ ಮಾಡಿಸಲು ಅಂಬೇಡ್ಕರ್ ಒಪ್ಪಿರಲಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.