ಆನೇಕಲ್: ಬನ್ನೇರುಘಟ್ಟ ಸಮೀಪದ ಬೂತಾನಹಳ್ಳಿ ಕೆರೆಯಲ್ಲಿ ಕಂಡು ಬಂದ ಮೊಸಳೆಯನ್ನು ಸಂರಕ್ಷಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಗೆ ಬಿಡಲಾಯಿತು.
ಬೂತಾನಹಳ್ಳಿ ಕೆರೆಯಲ್ಲಿ ಮೊಸಳೆ ಸೇರಿಕೊಂಡ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ರೈತರು ಕೆರೆಗೆ ದನಕರುಗಳನ್ನು ಕೊಂಡೊಯ್ಯಲು ಭಯಪಡುತ್ತಿದ್ದರು. ಕಲ್ಕೆರೆ ವಲಯ ಅರಣ್ಯಾಧಿಕಾರಿ ಗಣೇಶ್ ಅವರಿಗೆ ಈ ಸಂಬಂಧ ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೊಸಳೆಯನ್ನು ಹಿಡಿಯಲು ಗಣೇಶ್ ಅವರು ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ್ದರು.
ಕಲ್ಕೆರೆ ವಲಯ ಅರಣ್ಯ ವ್ಯಾಪ್ತಿಯ ಸಿಬ್ಬಂದಿ ಆಶಾ, ಅಣ್ಣಯ್ಯ ಮತ್ತು ಅರೋಚ ಸಂಸ್ಥೆಯ ಪದಾಧಿಕಾರಿಗಳು ಒಗ್ಗೂಡಿ ಕಾರ್ಯಾಚರಣೆ ನಡೆಸಿ ಕೆರೆಯಲ್ಲಿದ್ದ ಮೊಸಳೆಯನ್ನು ಸಂರಕ್ಷಿಸಿದ್ದಾರೆ. ಸಂರಕ್ಷಿಸಿದ ಮೊಸಳೆಯನ್ನು ಕಾಡಿನ ಕೆರೆಯೊಂದಕ್ಕೆ ಬಿಡಲಾಗಿದೆ.
ಬೂತಾನಹಳ್ಳಿ ಗ್ರಾಮದ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ರೈತರಿಗೆ ತೀವ್ರ ತೊಂದರೆಯಾಗಿತ್ತು. ಕುರಿ ದನ ಕರುಗಳನ್ನು ತೊಳೆಯಲು ಮತ್ತು ನೀರು ಕುಡಿಸಲು ಗ್ರಾಮದ ಜನರು ಕೆರೆಯನ್ನೇ ಅವಲಂಭಿಸಿದ್ದರು. ಕೆರೆಯಲ್ಲಿ ಮೊಸಳೆ ಕಂಡು ಬಂದಿದ್ದರಿಂದ ಭಯಗೊಂಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ತ್ವರಿತವಾಗಿ ಮೊಸಳೆ ಹಿಡಿದ್ದರಿಂದ ಗ್ರಾಮಸ್ಥರು ನೆಮ್ಮದಿಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಿ.ರವೀಶ್ ಗೌಡ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.