ADVERTISEMENT

ವಾಲ್ಮೀಕಿ ಭವನ ಕಾಮಗಾರಿ ಮುಕ್ತಾಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 14:30 IST
Last Updated 30 ಡಿಸೆಂಬರ್ 2019, 14:30 IST
ಸೂಲಿಬೆಲೆ ಪಟ್ಟಣದಲ್ಲಿ ನಿರ್ಮಾಣ ಹಂತದ ವಾಲ್ಮೀಕಿ ಭವನಕ್ಕೆ ಮುಖ್ಯದ್ವಾರ ಇಲ್ಲದಿರುವುದು
ಸೂಲಿಬೆಲೆ ಪಟ್ಟಣದಲ್ಲಿ ನಿರ್ಮಾಣ ಹಂತದ ವಾಲ್ಮೀಕಿ ಭವನಕ್ಕೆ ಮುಖ್ಯದ್ವಾರ ಇಲ್ಲದಿರುವುದು   

ಸೂಲಿಬೆಲೆ: ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಮಹರ್ಷಿ ವಾಲ್ಮೀಕಿ ಭವನ ಕಟ್ಟಡ ಮದ್ಯ ಕುಡಿಯುವವರ ಹಾಗೂ ಪಾರ್ಟಿ ಆಚರಿಸಿಕೊಳ್ಳುವವರ ತಾಣವಾಗಿ ಮಾರ್ಪಡುತ್ತಿದೆ.

ಸೂಲಿಬೆಲೆ ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ವಾಲ್ಮೀಕಿ ಭವನದ ಕಾಮಗಾರಿ ಭಾಗಶಃ ಸಂಪೂರ್ಣ ಮುಕ್ತಾಯವಾಗಿದ್ದು, ಭವನದ ಒಳಗೆ ಇರುವ ಕೊಠಡಿಗಳಿಗೆ ಮತ್ತು ಕಿಟಕಿಗಳಿಗೆ ಬಾಗಿಲುಗಳನ್ನು ಆಳವಡಿಸಲಾಗಿದೆ. ಆದರೆ ಭವನದ ಮುಖ್ಯದ್ವಾರಕ್ಕೆ ಬಾಗಿಲು ಅಳವಡಿಸದಿರುವುದರಿಂದ ಭವನದ ಒಳಗೆ ಕುರಿ ಮೇಕೆ ಇನ್ನಿತರ ಪ್ರಾಣೆಗಳ ಪ್ರವೇಶಿಸುತ್ತಿವೆ. ಕೂಡಲೇ ಸಂಬಂಧ ಪಟ್ಟ ಇಲಾಖೆಯವರು ಕಾಮಗಾರಿ ಪೂರ್ಣಗೊಳಿಸಬೇಕು. ಅನೈತಿಕ ಚಟುವಟಿಕೆಗಳನ್ನು ತಡೆಯಬೇಕು ಎಂದು ವಾಲ್ಮೀಕಿ ಸಮುದಾಯದ ಯುವಕ ಶಿವಶಂಕರ್ ಹಾಗೂ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹರ್ಷಿ ಶ್ರೀವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಲಾಗುತ್ತಿದ್ದು ಸುಮಾರು ₹ 50 ಲಕ್ಷದಲ್ಲಿ ಭವನ ನಿರ್ಮಾಣವಾಗಲಿದೆ. ಭವನದ ನಿರ್ಮಾಣದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರಿಗೆ ನೀಡಲಾಗಿದ್ದು ಕಾಮಗಾರಿ ಶೇ 90ರಷ್ಟು ಮುಕ್ತಾಯವಾಗಿದೆ. ಕಳೆದ ತಿಂಗಳಿನಲ್ಲಿ ಹೊಸಕೋಟೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ, ಚುನಾವಣೆ ನೀತಿ ಸಂಹಿತೆ ಜಾರಿ ಇದ್ದ ಕಾರಣ ಕಾಮಗಾರಿ ಮುಕ್ತಾಯವಾಗಲು ತಡವಾಗಿದೆ’ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಪ ನಿರ್ದೇಶಕರಾದ ಹನುಮಂತರಾಯಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡುತ್ತಾ, ‘ವಾಲ್ಮೀಕಿ ಭವನ ನಮ್ಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಭವನದ ಮುಖ್ಯದ್ವಾರ ಶೀಘ್ರವಾಗಿ ಹಾಕಿಸಲಾಗುವುದು ಹಾಗೂ ಭವನ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿರುವ ಏಜೆನ್ಸಿ ಅಥವಾ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.