ದೇವನಹಳ್ಳಿ: ಪ್ರಸಕ್ತ ಸಾಲಿನ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.24ರಿಂದ ಆರಂಭಗೊಳ್ಳಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿ ಸುಮಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ದಸರಾ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸೆ.27, 28ರಂದು ನಡೆಯಲಿದೆ. ಸಮಾರಂಭದ ಉದ್ಘಾಟನೆಗೆ ಶಿಷ್ಟಚಾರದಂತೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಹೇಳಿದರು.
ತಾಲ್ಲೂಕು ದಸರಾ ಕ್ರೀಡಾಕೂಟ ಸೆ.25 ರಂದು ದೇವನಹಳ್ಳಿ (ಟೌನ್ ಕ್ರೀಡಾಂಗಣ), ದೊಡ್ಡಬಳ್ಳಾಪುರ (ಭಗತ್ ಸಿಂಗ್ ಕ್ರೀಡಾಂಗಣ) ಹಾಗೂ ಹೊಸಕೋಟೆ (ಚನ್ನಬೈರೇಗೌಡ ಕ್ರೀಡಾಂಗಣ) ದಲ್ಲಿ ಏಕಕಾಲದಲ್ಲಿ ನಡೆಯಲಿದೆ. ಸೆ.24 ರಂದು ನೆಲಮಂಗಲ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸಂಘಟನೆಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ, ಆರೋಗ್ಯ ಇಲಾಖೆ ವತಿಯಿಂದ ಆ್ಯಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ, ಜಿಲ್ಲಾ, ತಾಲ್ಲೂಕು ಹಾಗೂ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸಿ ಸಮಾರಂಭದಲ್ಲಿ ಕುಡಿಯುವ ನೀರು, ಉಟೋಪಹಾರ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ರಮೇಶ್ ಇದ್ದರು.
ಎಲ್ಲಿ–ಯಾವಾಗ?
ತಾಲ್ಲೂಕು ಮಟ್ಟ ಸೆ.24: ನೆಲಮಂಗಲದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸೆ.25: ದೇವನಹಳ್ಳಿ ಟೌನ್ ಕ್ರೀಡಾಂಗಣ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣ ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣ ಜಿಲ್ಲಾ ಮಟ್ಟ ಸೆ.2728: ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.