ADVERTISEMENT

ದೇವನಹಳ್ಳಿ: ಬಲೆಗೆ ಸಿಕ್ಕ ಮೀನಿನಂತಾದ ಬೆಸ್ತರ ಬದುಕು

ಹೆಬ್ಬಾಳ, ನಾಗವಾರ ಕೆರೆ ನೀರು ಸಂಸ್ಕರಿಸಿ ಹರಿಸುವ ನೀರು ವಿಳಂಬ

ವಡ್ಡನಹಳ್ಳಿ ಬೊಜ್ಯನಾಯ್ಕ
Published 4 ನವೆಂಬರ್ 2020, 1:35 IST
Last Updated 4 ನವೆಂಬರ್ 2020, 1:35 IST
ಕೆರೆಯಲ್ಲಿ ಹಿಡಿದ ಮೀನು ಖರೀದಿಸಲು ಬಂದಿರುವ ಗ್ರಾಹಕರು 
ಕೆರೆಯಲ್ಲಿ ಹಿಡಿದ ಮೀನು ಖರೀದಿಸಲು ಬಂದಿರುವ ಗ್ರಾಹಕರು    

ದೇವನಹಳ್ಳಿ: ಬಯಲು ಸೀಮೆ ಜಿಲ್ಲೆಗೆ ಬಹು ನಿರೀಕ್ಷಿತ ಯೋಜನೆಗಳು ಸಕಾಲದಲ್ಲಿ ಸಿಗದೆ ಜಿಲ್ಲೆಯ ಬೆಸ್ತರ ಬದುಕು ಬಲೆಯಲ್ಲಿ ಸಿಕ್ಕಿ ಮೀನಿನಂತೆ ಆಗಿದೆ.

ದಶಕಗಳ ಕಾಲ ಬಯಲು ಸೀಮಗೆ ಶಾಶ್ವತ ಜಲಮೂಲ ರಕ್ಷಣೆಗೆಂದು ಅನುಷ್ಟಾನಗೊಂಡ ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ಹರಿಸುವ ನೀರು ಪೂರೈಕೆ ಯೋಜನೆ ತುಮಕೂರು ಜಿಲ್ಲೆಗಡಿ ದಾಟಿಲ್ಲ. ಇದರ ನಡುವೆ ಎತ್ತಿನಹೊಳೆ ವಿಳಂಬವಾಗಬಹುದು ಎಂಬ ಕಾರಣಕ್ಕಾಗಿ ಬೆಂಗಳೂರು ನಗರದ ಹೆಬ್ಬಾಳ ಮತ್ತು ನಾಗವಾರ ಕೆರೆ ತ್ಯಾಜ್ಯ ನೀರು ಸಂಸ್ಕರಿಸಿ ಚಿಕ್ಕಬಳ್ಳಾಪುರ, ದೇವನಹಳ್ಳಿ ತಾಲ್ಲೂಕಿಗೆ ಹರಿಸುವ ಯೋಜನೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ.

ಉತ್ತಮ ಮಳೆ ಬಂದರೂ ಈ ವರ್ಷ ಕೆರೆಗಳಿಗೆ ನೀರು ಹರಿದು ಬಂದಿಲ್ಲ. ಅಲ್ಪಸ್ವಲ್ಪ ಇರುವ ಕೆರೆ ನೀರಿನಲ್ಲಿ ಮೀನು ಸಾಕಣೆಗಾಗಿ ಹರಸಾಹಸ ಪಡಬೇಕಾಗಿದೆ. ಜಿಲ್ಲೆಯಲ್ಲಿ ಆರು ಸಾವಿರ ಕುಟುಂಬಗಳು ಮೀನುಗಾರಿಕೆ ಅವಲಂಬಿಸಿವೆ.

ADVERTISEMENT

ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 710 ಕೆರೆಗಳಿದ್ದು ಈ ಪೈಕಿ 643 ಕೆರೆಗಳು ಒತ್ತುವರಿ ವ್ಯಾಪ್ತಿಯಲ್ಲಿವೆ. 5.189 ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. 1.063 ಎಕರೆ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒತ್ತುವರಿ ಮಾಡಿಕೊಂಡಿದೆ. ಒಟ್ಟು 6552 .19 ಎಕರೆ ಕೆರೆಯಂಗಳ ಒತ್ತುವರಿಯಾಗಿದೆ. ಜಿಲ್ಲೆಯ ಒಟ್ಟಾರೆ 675.32 ಎಕರೆ ರಾಜ ಕಾಲುವೆ ವಿಸ್ತೀರ್ಣ ಪೈಕಿ 59.15 ಎಕರೆ ಒತ್ತುವರಿಯಾಗಿದೆ. ಇದು ಮೀಸಲು ಮತ್ತು ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿನ ಒತ್ತುವರಿ ಹೊರತು ಪಡಿಸಿ ಎಂದು ಜಿಲ್ಲಾ ಭೂಮಾಪನಾ ಇಲಾಖೆ ಉಪನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದರು.

ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೊಷಣೆ ಮಾಡಿತ್ತು. ಪ್ರಸ್ತುತ ವರ್ಷ ಮುಂಗಾರು ಮತ್ತು ಹಿಂಗಾರು ಆರಂಭದವರೆಗೆ ಉತ್ತಮ ಮಳೆ ಬಂದಿದೆ. ಒಟ್ಟಾರೆ ಈವರೆಗೆ ವಾಡಿಕೆ ಮಳೆಗಿಂತ 125ಮಿ.ಮೀ ಮಳೆ ಸುರಿದಿದೆ. ತ್ಯಾಜ್ಯ ಸಂಸ್ಕರಿಸಿ ಪೂರೈಕೆ ಮಾಡಿ ಕೆರೆಗಳಿಗೆ ಹರಿಸುವ ಕೆಲಸ ಆರಂಭವಾಗಿದ್ದರೂ ಒಂದೂಂದು ಕೆರೆ ಒಂದು ವರ್ಷವಾದರೂ ಅರ್ಧ ತುಂಬುವ ಲಕ್ಷಣ ಕಾಣುತ್ತಿಲ್ಲ ಎನ್ನುತ್ತಾರೆ ಮೀನು ಸಾಕಾಣಿಕೆದಾರರು.

ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ತಲಾ 50ಕೆರೆಗಳಿಗೆ ತ್ಯಾಜ್ಯ ಸಂಸ್ಕರಿಸಿದ ನೀರಿನ ಪೂರೈಕೆ ಸಕಾರಗೊಂಡರೆ ಕನಿಷ್ಠ ಜಿಲ್ಲೆಯಲ್ಲಿ 1.5ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿ ಬಯಲು ಸೀಮೆ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ, ಮೀನು ಸಾಕಾಣಿಕೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಸರ್ಕಾರಕ್ಕೆ ಇಚ್ಛಾಸಕ್ತಿ ಬೇಕು ಎನ್ನುತ್ತಾರೆ ಆರ್.ಟಿ.ಐ ಕಾರ್ಯಕರ್ತ ಆಂಜಿನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.