ದೇವನಹಳ್ಳಿ: ಸಂಪತ್ಭರಿತ ಸಂಪನ್ಮೂಲ ಹೊಂದಿರುವ ಐತಿಹಾಸಿಕ ಕೊಯಿರ ಬೆಟ್ಟಕ್ಕೆ ಕಿಡಿಗೇಡಿಗಳು ಇಟ್ಟ ಬೆಂಕಿಯಿಂದ ಬೆಟ್ಟದ ಪೂರ್ವದಿಕ್ಕಿನಲ್ಲಿ ಸುಮಾರು 50 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗಾಹುತಿಯಾಗಿದೆ.
ಶುಕ್ರವಾರ ಮಧ್ಯಾಹ್ನದಿಂದ ಆರಂಭದ ಬೆಂಕಿ ಶನಿವಾರ ಸಂಜೆಯಾದರೂ ಉರಿಯುತ್ತಿತು. ಬೆಂಕಿ ನಂದಿಸುವ ಕಾರ್ಯಕ್ಕೆ ಯಾರು ಮುಂದಾಗದ ಕಾರಣ ಹೆಚ್ಚಿನ ಅರಣ್ಯ ಸಂಪತ್ತು ನಾಶಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರತಿ ಬಾರಿ ಬೇಸಿಗೆಯಲ್ಲಿ ಬೆಟ್ಟಕ್ಕೆ ಬೆಂಕಿ ಬೀಳುತ್ತಿದ್ದು, ಕಳೆದ ವರ್ಷವೂ ಸಾಕಷ್ಟು ಹಾನಿಯಾಗಿದೆ. ಬೇಸಿಗೆ ಮುನ್ನ ಅರಣ್ಯ ಪ್ರದೇಶ ಬೆಂಕಿಯಿಂದ ನಾಶ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಧಿಕಾರಿಗಳು ವಹಿಸುತ್ತಿಲ್ಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೊಯಿರ ಬೆಟ್ಟದಲ್ಲಿರುವ ಏಕ ಶಿಲಾ ಬಂಡೆಯನ್ನು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗಿದೆ. ಆದರೂ ಈ ಪ್ರದೇಶವನ್ನೂ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಇಲಾಖೆಗಳ ಸಮನ್ವಯತೆ ಕೊರತೆಯಿಂದ ಬೆಟ್ಟ ಸಂರಕ್ಷಣೆಯ ಕೆಲಸವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕೊಯಿರದ ನಿವಾಸಿ ಚಿಕ್ಕೇಗೌಡ ದೂರಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಯಿರ ಬೆಟ್ಟದ ಉಳಿವಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಯಾವುದೇ ಉಪಯೋಗ ಆಗುತ್ತಿಲ್ಲ. ಈ ಪ್ರದೇಶದಲ್ಲಿ ಚಿರತೆ ಸೇರಿದಂತೆ ಸಾಕಷ್ಟು ವನ್ಯ ಜೀವಿಗಳು ವಾಸಿಸುತ್ತಿವೆ. ಔಷಧಿಯ ಗುಣ ಹೊಂದಿರುವ ಸಸ್ಯ ಸಂಪತ್ತು ಇದೆ. ಇವೆಲ್ಲವು ಬೆಂಕಿಯ ಕೆನ್ನಾಲಿಗೆ ನಷ್ಟವಾಗುತ್ತಿದೆ ಎನ್ನುವುದು ಗ್ರಾಮಸ್ಥರ ಕಳವಳ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.