ಹೊಸಕೋಟೆ: ಆಧುನಿಕ ಜಗತ್ತಿನ ಸ್ಪರ್ಧಾತ್ಮಕ ಯುಗದಲ್ಲಿ, ಜಾಲತಾಣಗಳ ಈ ಕಾಲದಲ್ಲಿ ರಂಗಕಲೆ, ಸಿನಿಮಾಗಳನ್ನು ಕಡೆಗಣಿಸುವ ಪರಿಸ್ಥಿತಿ ಎದುರಾಗಿದೆ. ಜನಪದ ಕಲೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಟಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಸಮೀಪದ ನಿಂಬೇಕಾಯಿಪುರದ ಅಭಯಾಂಜನೇಯ ದೇವಾಲಯದ ಆವರಣದಲ್ಲಿರುವ ರಂಗಮಂದಿರದಲ್ಲಿ ‘ಜನಪದರು’ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ರಂಗಮಾಲಿಕೆ 42 ಅಡಿಯಲ್ಲಿ ಬೆಳತೂರು ರಾಮಕೃಷ್ಣಪ್ಪ ನಿರ್ದೇಶನದ ‘ತಿರುಕ ರಾಜ’ ನಾಟಕ ಪ್ರದರ್ಶನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇಂಟರ್ನೆಟ್ ಯುಗದಲ್ಲಿ ಜನರಿಗೆ ಬೇಕಾದ ಮಾಹಿತಿಗಳನ್ನು ಹಾಗೂ ಮನೋರಂಜನೆಯನ್ನು ಅವರ ಬೇಡಿಕೆ ಅನುಗುಣವಾಗಿ ಪ್ರತಿಯೊಬ್ಬರೂ ಪಡೆಯುತ್ತಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿ ಜನಪದರ ತಂಡ ಕಳೆದ 42 ತಿಂಗಳಿನಿಂದ ಪ್ರತಿ ತಿಂಗಳೂ ದೇಶದ ಮೂಲೆಮೂಲೆಗಳಿಂದ ಪ್ರಸಿದ್ಧ ನಾಟಕದ ತಂಡವನ್ನು ಕರೆಯಿಸಿ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಹಾಗೆಯೇ ಪ್ರತಿ ತಿಂಗಳೂ ಸಾವಿರಾರು ರಂಗಪ್ರಿಯರು ಬಂದು ನಾಟಕಗಳನ್ನು ವೀಕ್ಷಣೆ ಮಾಡುವುದು ಕಂಡರೆ ಮುಂದಿನ ಪೀಳಿಗೆಗೆ ರಂಗಕಲೆಯನ್ನು ಕೊಡುಗೆಯಾಗಿ ಕೊಡುವುದು ಅನುಮಾನವಿಲ್ಲ ಎಂದರು.
ವೇದಿಕೆಯ ಅಧ್ಯಕ್ಷ ಪಾಪಣ್ಣ ಮಾತನಾಡಿ, ‘ರಂಗಕಲೆಯನ್ನು ಜೀವಂತವಾಗಿರಿಸಲು ದುಡಿಯುತ್ತಿರುವ ಕಲಾವಿದರಿಗೆ ವೇದಿಕೆ ಹಾಗೂ ಕಲಾಪ್ರಿಯರ ಸಹಕಾರವಿದ್ದು ಈ ಕಾರ್ಯಕ್ರಮವನ್ನು ದೇಶವಿದೇಶಗಳಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ನಮಗಿದೆ’ ಎಂದರು.
‘ಹೈದರಾಬಾದ್ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಈ ನಾಟಕವನ್ನು ನಮ್ಮ ತಂಡ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.
ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಶ್ರೀನಿವಾಸ್, ಸುಹಾಸ್ ಅವರನ್ನು ಸನ್ಮಾನಿಸಲಾಯಿತು. ಸಿದ್ದೇಶ್ ಬನಹಳ್ಳಿ, ಜಗದೇಶ್ ಕೆಂಗನಾಳ್, ಶಿವಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.