ದೇವನಹಳ್ಳಿ: ಸಹಕಾರ ಸಂಘದ ವ್ಯಾಪ್ತಿಯಲ್ಲಿ ವಿವಿಧ ಯೋಜನೆ ರೂಪಿಸಿ ಸಂಪನ್ಮೂಲ ಕ್ರೋಡೀಕರಿಸಿ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ನೂತನ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್ ಹೇಳಿದರು.
ಇಲ್ಲಿನ ಕೋಟೆ ಬೀದಿಯಲ್ಲಿರುವ ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಎರಡನೇ ಬಾರಿಗೆ ಆಯ್ಕೆಗೊಂಡ ನಂತರ ಸಂಘದ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪ್ರಸ್ತುತ ಸಹಕಾರ ಸಂಘದಲ್ಲಿ ಹೆಚ್ಚಿನ ಸಂಪನ್ಮೂಲವಿಲ್ಲ, ವಹಿವಾಟಿನಲ್ಲಿ ಲಾಭವೂ ಇಲ್ಲ, ನಷ್ಟವು ಇಲ್ಲ. ನಗರದಲ್ಲಿ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಜಾಗವನ್ನು ಗುರುತಿಸಿ ಜನತಾ ಬಜಾರ್ ಮಳಿಗೆ ಆರಂಭಿಸಬೇಕು ಎಂದು ಹೇಳಿದರು.
ನಗರದಲ್ಲಿ ಮಾಲ್ಗಳ ಕೊರತೆ ಇಲ್ಲ. ಆದರೂ ವಸ್ತುಗಳ ಗುಣಮಟ್ಟ ಮತ್ತು ಮಾರಾಟದಲ್ಲಿ ಶೇಕಡಾ ಇಂತಿಷ್ಟು ಕಡಿಮೆ ಬೆಲೆ ಇದ್ದರೆ ಗ್ರಾಹಕರು ಹುಡುಕಿಕೊಂಡು ಖರೀದಿಗೆ ಬರುತ್ತಾರೆ. ಗ್ರಾಹಕರನ್ನು ಸೆಳೆಯುವ ಸಾಮರ್ಥ್ಯ ಮಾರಾಟಗಾರರಿಗೆ ಇರಬೇಕು ಎಂದು ಹೇಳಿದರು.
ಸಂಘದ ನೂತನ ಉಪಾಧ್ಯಕ್ಷ ಸಿ.ಮಂಜುನಾಥ್, ನಿರ್ದೇಶಕರಾದ ದಾಸಪ್ಪ, ಜಿ.ಸಿ.ಮಂಜುನಾಥ್, ಬಿ.ಎ.ಕುಮಾರ್, ನರಸಿಂಹಮೂರ್ತಿ, ಎಸ್.ಗೋಪಾಲ್, ಮಂಜುಳಾ, ಪಿ.ಎ.ಗಾಯಿತ್ರಿದೇವಿ, ರಾಜಣ್ಣ, ಕೆ.ಅಶ್ವಥನಾರಾಯಣ, ಜಿ.ಎನ್.ನಾಗರಾಜು, ಮುಖಂಡರಾದ ಸಿ.ಜಗನ್ನಾಥ್, ಮುನಿನಂಜಪ್ಪ, ರವಿಕುಮಾರ್, ಸುರೇಶ್, ಪುರಸಭೆ ಸದಸ್ಯ ರವೀಂದ್ರ, ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.