ದೇವನಹಳ್ಳಿ: ನಗರದ ವಾರ್ಡ್ ನಂ 16 ಅಂಬೇಡ್ಕರ್ ಕಾಲೊನಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯು ಸರಾಸರಿ ಶೇಕಡವಾರು 90ರಷ್ಟು ಪ್ರಗತಿ ಕಂಡಿದೆ. ಈ ಕುರಿತು ‘ಪ್ರಜಾವಾಣಿ’ ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಈ ಹಿಂದಿನ ಆನೇಕ ಸಮಸ್ಯೆಗಳು ನಿವಾರಣೆಯಾಗಿವೆ. ವೈಯಕ್ತಿಕ ಮತ್ತು ಸಾಮೂಹಿಕ ಶೌಚಾಲಯಗಳು ಶೇಕಡ 95ರಷ್ಟು ಸುಧಾರಣೆ ಕಂಡಿವೆ. ಕಿತ್ತು ಹೋಗಿದ್ದ ವಾರ್ಡಿನ ಬೀದಿಗಳಲ್ಲಿ ರಸ್ತೆಗಳು ಶೇಕಡ 100ರಷ್ಟು ಸಿಮೆಂಟ್ ರಸ್ತೆಗಳಾಗಿವೆ. ಕಳೆದ ಎರಡು ವರ್ಷಗಳ ಹಿಂದೆ 15ದಿನಗಳಿಗೊಮ್ಮೆ ಕುಡಿಯುವ ನೀರು ನಲ್ಲಿಗಳಲ್ಲಿ ಪೂರೈಕೆಯಾಗುತ್ತಿತ್ತು. ಪ್ರಸ್ತುತ ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ ಎಂದು ವಾರ್ಡಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಾರ್ಡಿನ ಪ್ರಗತಿ ಮತ್ತು ಸಮಸ್ಯೆ ಕುರಿತು ಮಾಹಿತಿ ನೀಡಿದ ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ವಾರ್ಡಿನಲ್ಲಿ ಅಂದಾಜು 280 ರಿಂದ 300 ಕುಟುಂಬಗಳು ಇದ್ದು, 1,100ರಿಂದ 1,200 ಜನಸಂಖ್ಯೆ ಇದೆ. ವಿದ್ಯುತ್ ದೀಪ, ರಸ್ತೆಗಳ ಅಭಿವೃದ್ಧಿ ಪಡಿಸಲಾಗಿದೆ. ಅಂಗನವಾಡಿ ಕೇಂದ್ರ ಮೇಲ್ದರ್ಜೆಗೆ ಏರಿಸಲಾಗಿದೆ. ಪರಿಶಿಷ್ಟ ಜಾತಿ ಮೀಸಲು ಅನುದಾನದಲ್ಲಿ ಅಡುಗೆ ಅನಿಲ ಮತ್ತು ಸ್ಟೌ ನೀಡಿದ ಪರಿಣಾಮ ಶೇಕಡ 95ರಷ್ಟು ಉರುವಲು ಮುಕ್ತ ಕುಟುಂಬಗಳಾಗಿವೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷದಲ್ಲಿ ಪುರಸಭಾ ನಿಧಿ ₹2ಕೋಟಿ, 14ನೇ ಹಣಕಾಸು ನಿಧಿ ₹2ಕೋಟಿ, ಬೈಯಾಪದಿಂದ ₹50 ಲಕ್ಷ ಅನುದಾನ ಬರಲಿದೆ. ನಗರೋತ್ಥಾನ ಯೋಜನೆಯಡಿ ₹4 ಕೋಟಿ ಅನುದಾನ ಕೆಲವು ತಾಂತ್ರಿಕ ತೊಂದರೆಯಿಂದ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಶುಚಿತ್ವಕ್ಕೆ ಒತ್ತು ನೀಡಿ ಪ್ಲಾಸ್ಟಿಕ್ ಮುಕ್ತ ಪುರಸಭೆಗೆ ಶ್ರಮಿಸಲಾಗುತ್ತಿದೆ. ಪೌರ ಕಾರ್ಮಿಕರಿಗೆ ಗೃಹ ಭಾಗ್ಯಯೋಜನೆಯಡಿ ಒಂದೂವರೆ ಎಕರೆ ಜಾಗ ಗುರುತಿಸಲಾಗಿದ್ದು, ಸಾಮೂಹಿಕ ವಸತಿ ಕಲ್ಪಿಸಲಾಗುತ್ತಿದೆ. 16ನೇ ವಾರ್ಡ್ ಸೇರಿದಂತೆ ಎಲ್ಲ ವಾರ್ಡ್ಗಳನ್ನು ಮಾದರಿಯನ್ನಾಗಿಸಲು ಶ್ರಮಿಸಲಾಗುತ್ತಿದೆ ಎಂದು ಎಂ.ಮೂರ್ತಿ ಮಾಹಿತಿ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.