ADVERTISEMENT

ಅಭಿವೃದ್ಧಿ ಕಾಮಗಾರಿಯಲ್ಲಿ ತಾರತಮ್ಯ

₹ 30 ಕೋಟಿ ಅನುದಾನ ತಡೆ ಹಿಡಿದ ರಾಜ್ಯ ಸರ್ಕಾರ: ಶಾಸಕರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 5:05 IST
Last Updated 3 ಆಗಸ್ಟ್ 2021, 5:05 IST
ಹಾಡೋನಹಳ್ಳಿ ತೂಬಗೆರೆ ಕೆರೆ ಏರಿಯ ರಸ್ತೆ ಕಾಮಗಾರಿಗೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೂಮಿಪೂಜೆ ನೆರವೇರಿಸಿದರು
ಹಾಡೋನಹಳ್ಳಿ ತೂಬಗೆರೆ ಕೆರೆ ಏರಿಯ ರಸ್ತೆ ಕಾಮಗಾರಿಗೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೂಮಿಪೂಜೆ ನೆರವೇರಿಸಿದರು   

ತೂಬಗೆರೆ (ದೊಡ್ಡಬಳ್ಳಾಪುರ): ‘ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅನುಮೋದನೆಯಾಗಿದ್ದ ₹ 30 ಕೋಟಿ ಅನುದಾನವನ್ನು ಈಗಿನ ಬಿಜೆಪಿ ಸರ್ಕಾರ ಮಂಜೂರು ಮಾಡದೆ ತಡೆಹಿಡಿದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿಯಲ್ಲಿ ಸೋಮವಾರ ನಡೆದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಎಸ್‍ಎಸ್‍ಜಿಪಿ ಯೋಜನೆಯಲ್ಲಿ ₹ 6 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತೂಬಗೆರೆ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ADVERTISEMENT

ತಾಲ್ಲೂಕಿನ ಹಾಡೋನಹಳ್ಳಿ ವೃತ್ತದಿಂದ ತೂಬಗೆರೆ ಕೆರೆ ಏರಿ ಮೇಲಿನ ರಸ್ತೆ ವಿಸ್ತರಣೆ ಕಾಮಗಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಮೆಳೇಕೋಟೆ ಕ್ರಾಸ್‍ವರೆಗೆ, ನೆಲಮಂಗಲ ಚಿಕ್ಕಬಳ್ಳಾಪುರ ರಾಜ್ಯ ಹೆದ್ದಾರಿ ಸಂಪರ್ಕಿಸುವ 5 ಕಿ.ಮೀ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ತೂಬಗೆರೆ ಹೋಬಳಿಯ ಹಾಡೋನಹಳ್ಳಿ ವೃತ್ತದಿಂದ ತೂಬಗೆರೆ ಕೆರೆ ಏರಿಯನ್ನು ₹ 75 ಲಕ್ಷ ವೆಚ್ಚದಲ್ಲಿ 5.5 ಮೀ ವರೆಗೆ ವಿಸ್ತರಿಸಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.

ತೂಬಗೆರೆ ಹೋಬಳಿಯಲ್ಲಿ ಹಲವಾರು ಕಾಮಗಾರಿಗಳು ಕುಂಠಿತವಾಗಿವೆ. ಚಿಕ್ಕರಾಯಪ್ಪನಹಳ್ಳಿ, ಮೆಳೇಕೋಟೆ ಕೆರೆ ಅಭಿವೃದ್ಧಿ, ವಿಶ್ವೇಶ್ವರಯ್ಯ ಪಿಕ್‍ಅಪ್‍ ಡ್ಯಾಂ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಬಿಡುಗಡೆ ಮಾಡಬೇಕಿದೆ ಎಂದರು.

ನೂತನ ಮುಖ್ಯಮಂತ್ರಿ ಅವರು ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಬಾರದು. 224 ಕ್ಷೇತ್ರಗಳ ಶಾಸಕರನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ದೇವನ ಹಳ್ಳಿ ವಿಧಾನಸಭಾ ಕ್ಷೇತ್ರ ಹಿಂದುಳಿದೆ. ತಾಲ್ಲೂಕಿಗೆ ಮಂಜೂ ರಾಗಿದ್ದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಜೆಡಿಎಸ್‌ ಮುಖಂಡರಾದ ಎಚ್. ಅಪ್ಪಯ್ಯ, ಎ. ನರಸಿಂಹಯ್ಯ, ಹಾಡೋನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾಬಾಯಿ, ಉಪಾಧ್ಯಕ್ಷ ಎಚ್.ಎ. ನಾಗರಾಜ್, ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ದೇವರಾಜ್, ದ ಮುದ್ದಣ್ಣ, ಗೌರೀಶ್, ನಾರಾಯಣಪ್ಪ, ಕುಮಾರ್, ಪುರುಷೋತ್ತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.