ದೊಡ್ಡಬಳ್ಳಾಪುರ: ರಾತ್ರಿ ವೇಳೆ ಕಾರ್ಮಿಕರನ್ನು ಬೆದರಿಸಿ ಹಣ ಮತ್ತು ಮೊಬೈಲ್ ಫೋನ್ ಸುಲಿಗೆ ಮಾಡುತ್ತಿದ್ದ ಮೂವರು ದರೋಡೆಕೋರರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಆಕಾಶ್ (19), ಪ್ರವೀಣ (18), ಹನುಮಂತ (22) ಬಂಧಿತರು. ಇವರಿಂದ ₹4.2 ಲಕ್ಷ ಮೌಲ್ಯದ 20 ಸ್ಮಾರ್ಟ್ ಫೋನ್ ವಶಕ್ಕೆ ಪಡೆಯಲಾಗಿದೆ.
ಏ.14ರ ರಾತ್ರಿ 11.30ಕ್ಕೆ ಆಲೂರು-ದುದ್ದನಹಳ್ಳಿಯ ಅಮರ್ ತಮ್ಮ ಸ್ನೇಹಿತ ಕೋಡಿಹಳ್ಳಿಯ ನಿವಾಸಿ ಕುಮಾರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮಕ್ಕೆ ತೆರಳತ್ತಿದ್ದರು. ಈ ವೇಳೆ ದಾರಿ ಮಧ್ಯ ಬೈಕ್ ತಡೆದ ಮೂವರು ಅಪರಿಚಿತರು ಮಾರಕಾಸ್ತ್ರ ತೋರಿಸಿ, ಇಬ್ಬರಿಂದ ಮೊಬೈಲ್ ಮತ್ತು ಹಣ ಕಸಿಯಲು ಯತ್ನಿಸಿದ್ದರು. ಈ ವೇಳೆ ಸಮೀಪದ ಗ್ರಾಮಸ್ಥರು ದುಷ್ಕರ್ಮಿಗಳನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕಲಬುರಗಿಯಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಇವರು ಗಾರೆ ಕೆಲಸ ಮಾಡುತ್ತಿದ್ದರು. ಚಿಕ್ಕಜಾಲದಲ್ಲಿ ವಾಸವಿದ್ದ ಇವರಲ್ಲಿ ಒಬ್ಬಾತ ವಿದ್ಯಾರ್ಥಿ.
ಉತ್ತರ ಭಾರತದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಇವರು, ಕಾರ್ಮಿಕರಿಗೆ ಸಂಬಳ ಆದ ದಿನ ರಾತ್ರಿ ಹೊತ್ತು ಹೊಂಚು ಹಾಕಿ ಮಾರಾಕಾಸ್ತ್ರ ತೋರಿಸಿ ಹೆದರಿಸುತ್ತಿದ್ದರು. ಅವರಿಂದ ಹಣ ಮತ್ತು ಮೊಬೈಲ್ ಸುಲಿಗೆ ಮಾಡುತ್ತಿದ್ದರು. ಸುಲಿಗೆ ಮಾಡಿದ ಹಣದಲ್ಲಿ ಮೋಜು–ಮಸ್ತಿ ಮಾಡುತ್ತಿದ್ದರು ಎಂದು ಇನ್ಸ್ಪೆಕ್ಟರ್ ಸಾದಿಕ್ ಪಾಷಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.