ADVERTISEMENT

ದೊಡ್ಡಬಳ್ಳಾಪುರ | ‘ಘನತ್ಯಾಜ್ಯ ಘಟಕದ ವಿರುದ್ಧ ಜನ ಧಂಗೆ: ಹುಷಾರ್!’

ದೊಡ್ಡಬೆಳವಂಗಲ ಹೋಬಳಿ ಮುಚ್ಚಿರುವ ಘಟಕಕ್ಕೆ ಮರುಜೀವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 1:55 IST
Last Updated 15 ಡಿಸೆಂಬರ್ 2025, 1:55 IST
ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್ ಮಾತನಾಡಿದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್ ಮಾತನಾಡಿದರು.   

ದೊಡ್ಡಬಳ್ಳಾಪುರ: ಜನರಿಗೆ ಮತ್ತು ಪರಿಸರಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ ಎಂಬುದಾದರೆ ದಯವಿಟ್ಟು ಅಂತಹ ಒಂದು ಕಸ ಸಂಸ್ಕರಣಾ ಘಟಕವನ್ನು ಶ್ರೀಮಂತರು ವಾಸಿಸುವ ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಮೊದಲು ಆರಂಭಿಸಲಿ. ಅಲ್ಲಿ ಯೋಜನೆ ಯಶಸ್ವಿಯಾದರೆ ನಂತರ ದೊಡ್ಡಬಳ್ಳಾಫುರ ತಾಲ್ಲೂಕಿನಲ್ಲಿ ಸ್ಥಾಪಿಸುವ ಬಗ್ಗೆ ಯೋಚಿಸಲಿ...

ಇದು ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ ಮುಚ್ಚಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಮತ್ತೆ ಪುನಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ನವ ಬೆಂಗಳೂರು ಹೋರಾಟ ಸಮಿತಿ ಪ್ರತಿಭಟನೆ ವ್ಯಕ್ತಪಡಿಸಿದ ರೀತಿ. 

ಸರ್ಕಾರ ಈ ನಿರ್ಧಾರವನ್ನು ಕೂಡಲೇ ಕೈಬಿಡದಿದ್ದರೆ ಜನ ಧಂಗೆ ಏಳುತ್ತಾರೆ ಎಂದು ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ADVERTISEMENT

ದೊಡ್ಡಬೆಳವಂಗಲ ಹೋಬಳಿಯಲ್ಲಿ ಅತ್ಯಾಧುನಿಕ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದಾರೆ. ಪ್ರಕೃತಿಯ ಒಡಲಿಗೆ ವಿಷ ಹಾಕಿ ಸಹಸ್ರಾರು ಜನತೆಯ ಜೀವಗಳನ್ನು ನರಕಕ್ಕೆ ತಳ್ಳಿದ ಗುಂಡ್ಲಹಳ್ಳಿ ಬಳಿಯ ಟೆರ್ರಾಫರ್ಮಾ ಎಂಬ ಕಸದ ಹೆಮ್ಮಾರಿಯನ್ನು ಮತ್ತೆ ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಸಜ್ಜುಗೊಂಡಂತೆ ತೋರುತ್ತದೆ ಎಂದು ದೂರಿದರು.

ಸರ್ಕಾರದ ಈ ನಿರ್ಧಾರವನ್ನು ಶಾಸಕ ಧೀರಜ್ ಮುನಿರಾಜು ಖಂಡಿಸಿರುವ ನಿರ್ಧಾರವನ್ನು ನವ ಬೆಂಗಳೂರು ಹೋರಾಟ ಸಮಿತಿ ಸ್ವಾಗತಿಸುತ್ತದೆ. ಟೆರ್ರಾಫರ್ಮಾ ಮುಚ್ಚುವ ವೇಳೆ ಎಂಎಸ್‌ಜಿಪಿ ಮಚ್ಚುವುದಾಗಿ ಭರವಸೆ ನೀಡಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಗಳ ಜನತೆಯ ಬದುಕಿನ ನೆಮ್ಮದಿ ಕಿತ್ತು, ಹಲವು ದಶಕಗಳಿಗಾಗುವಷ್ಟು ವಿಷವನ್ನು ಉಣಿಸಿದ್ದು, ಜನರ ಬದುಕು ಕಿತ್ತುಕೊಂಡಿದೆ ಎಂದರು.

ದಶಕದ ಹಿಂದೆ ಎಂಎಸ್‌ಜಿಪಿ ತ್ಯಾಜ್ಯ ನಿರ್ವಹಣಾ ಘಟಕ ತಾಲ್ಲೂಕಿಗೆ ಹೆಜ್ಜೆ ಇಡುವಾಗಲೂ ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸಂಸ್ಕರಣೆ, ಫರ್ಟಿಲೈಜೇಷನ್ ಎಂಬಿತ್ಯಾದಿ ಸುಳ್ಳು ಹೇಳಿ ಯಾವ ನಿಯಮ ಪಾಲಿಸದೇ ಕಸದರಾಶಿ ಹಾಕಿ ಜನರ ಆರೋಗ್ಯ ಕೆಡಿಸಿ ಪರಿಸರ ಮಾಲಿನ್ಯ ಮಾಡಿದರು.

ಭಕ್ತರಹಳ್ಳಿ ಗ್ರಾ.ಪಂ ಅಧ್ಯಕ್ಷ ಬಿ.ಆರ್.ಸಿದ್ದಲಿಂಗಯ್ಯ ಮಾತನಾಡಿ, ಟೆರ್ರಾಫರ್ಮಾ ಹಾಗೂ ಎಂಎಸ್‌ಜಿಪಿ ಕಸದ ಪರಿಣಾಮ ಸುತ್ತಮುತ್ತಲ ವಾತಾವರಣ ಕಲುಷಿತವಾಗಿದೆ. ಎರಡು ಹೋಬಳಿಗಳಿಗಷ್ಟೇ ಅಲ್ಲದೇ ತುಮಕೂರು ಭಾಗಕ್ಕೂ ಮುಟ್ಟಿ, ಕಲುಷಿತ ನೀರು ಮಾವತ್ತೂರು ಕೆರೆ ಸೇರಿದೆ. ಜನರ ಹಿತಕ್ಕೆ ಮಾರಕವಾಗಿರುವ ಸರ್ಕಾರದ ಈ ನಿರ್ಧಾರಕ್ಕೆ ಭಕ್ತರಹಳ್ಳಿ ಗ್ರಾ.ಪಂ ಸದಸ್ಯರು ಹಾಗೂ ಇಲ್ಲಿನ ರೈತರ ತೀವ್ರ ವಿರೋಧವಿದ್ದು ಘಟಕ ಸ್ಥಾಪಿಸಿದರೆ ಜನ ಧಂಗೆ ಏಳಲಿದ್ದಾರೆ ಎಂದರು. ಮಧು.ಪಿ, ರಾಜು ನಾಯಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.