ವಿಜಯಪುರ (ದೇವನಹಳ್ಳಿ): ಪಟ್ಟಣದ ಸಮೀಪವಿರುವ ಅಂಕತಟ್ಟಿ ಗ್ರಾಮದ ಮುನೇಶ್ವರ ದೇವಾಲಯದ ಸಮೀಪದ ಪಾಳು ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ತಾಸು ಕಾರ್ಯಾಚರಣೆ ನಡೆಸಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.
ಕಳೆದ 20 ದಿನದ ಹಿಂದೆ ಅಂಕತಟ್ಟಿ ಗ್ರಾಮದ ಬಿ.ಶ್ರೀನಿವಾಸ್ ಸಾಕಿದ್ದ ನಾಯಿ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಆಕಸ್ಮಿಕವಾಗಿ ಊರಿನ ಹಿರಿಯರೊಬ್ಬರು ಬಾವಿ ಸಮೀಪ ಓಡಾಡುತ್ತಿದ್ದಾಗ ನಾಯಿಯ ಕೂಗು ಕೇಳಿದೆ. ಕೂಡಲೇ ಶ್ರೀನಿವಾಸ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ಬಳಿಕ ಶ್ರೀನಿವಾಸ್ ಅವರು ಬಾವಿಯಿಂದ ನಾಯಿಯನ್ನು ಮೇಲೆತ್ತಲು ಶಿಡ್ಲಘಟ್ಟ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯ ಕೇಳಿದ್ದಾರೆ. ಇದಕ್ಕೆ ಸ್ಪಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 70 ಅಡಿ ಆಳದ ಬಾವಿಗೆ ಹಗ್ಗ ಇಳಿಸಿ ಸುರಕ್ಷಿತವಾಗಿ ನಾಯಿಯನ್ನು ಮೇಲೆತ್ತಿದ್ದಾರೆ.
ಹಸಿವಿನಿಂದ ಬಳಲಿದ್ದ ನಾಯಿ ತುಂಬಾ ಬಳಲಿದಂತೆ ಕಂಡು ಬಂದಿತು. ಅದರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಬಾವಿಯಿಂದ ಮೇಲೆ ಬಂದ ನಾಯಿ ಮಾಲೀಕನನ್ನು ನೋಡಿದ ಕೂಡಲೇ ಬಾಲ ಅಲ್ಲಾಡಿಸುತ್ತ ಅಪ್ಪಿ, ಮುದ್ದಾಡಿತು. ಈ ದೃಶ್ಯ ಅಲ್ಲಿದ್ದ ಎಲ್ಲರನ್ನೂ ಭಾವುಕಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.