ದೇವನಹಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆ ಕಾವು ಏರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅಬ್ಬರ ಹೆಚ್ಚಿದೆ. ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ನಲ್ಲಿ ಹಲವು ಭಿನ್ನ ರೀತಿಯ ಅಭಿಪ್ರಾಯಗಳು ವೈರಲ್ ಆಗುತ್ತಿವೆ.
’ಮತಯಾಚನೆಗೆ ಬರುವವರು ರಾಮಾಯಣ, ಮಹಾಭಾರತ, ಸಂವಿಧಾನ ಓದಿ ಅರ್ಥೈಸಿಕೊಂಡಿದ್ದರೆ ಮಾತ್ರ ಮತ ಕೇಳಲು ಬನ್ನಿ. ಇಲ್ಲವೇ ಮನೆಯಿಂದ ಹತ್ತು ಮೀಟರ್ ದೂರು ನಿಲ್ಲಿ‘ ಎನ್ನುವ ನಾಮಫಲಕವೊಂದನ್ನು ಗೇಟ್ಗೆ ನೇತು ಹಾಕಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಕುತೂಹಲ ಮೂಡಿಸಿದೆ.
ಬೀರಪ್ಪ ಎಂಬುವರು ’ಚುನಾವಣೆಯನ್ನು ಚುನಾವಣೆ ರೀತಿಯಲ್ಲಿ ಎದುರಿಸಲು ಸಂಕಲ್ಪ ಮಾಡಿ. ದ್ವೇಷ, ಕೋಪ ಬೆದರಿಕೆ ಬೇಡ. ಸ್ನೇಹ ಸಂಬಂಧ, ಮಾನವೀಯತೆ, ಪ್ರೀತಿ, ವಿಶ್ವಾಸ, ನಂಬಿಕೆ ಕಳೆದುಕೊಳ್ಳಬೇಡಿ. ಚುನಾವಣೆ ವೇಳೆ ನೀಡುವ ಭರವಸೆ ಗೆದ್ದನಂತರ ಈಡೇರಿಸಿ. ಸಮಸ್ಯೆಗಳಿಗೆ ಸ್ವಂದಿಸುವ ಮನೋಭಾವ ಬೆಳೆಸಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ‘ ಎಂದು ಬರೆದುಕೊಂಡಿದ್ದಾರೆ.
ನಾಗರಾಜ್ ಎಂಬುವರ ಫೇಸ್ಬುಕ್ನಲ್ಲಿ ’ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸೀರೆ, ಎಣ್ಣೆ, ಕಾಸು ಇಸ್ಕೋಂಡು ಮತ ಹಾಕಿಸಿದ್ದೀಯ. ಅದಕ್ಕಾಗಿ ಮಣ್ಣು ತಿಂದಿದ್ದೀವಿ. ಈ ಬಾರಿ ಅದೇ ಕೆಲಸ ಮಾಡಿದರೆ ನೆಟ್ಟಗಿರಲ್ಲ’ ಎಂದು ತನ್ನ ಪತಿಗೆ ತರಾಟೆಗೆ ತೆಗೆದುಕೊಂಡಿರುವ ಬರಹವೊಂದು ವೈರಲ್ ಆಗಿದೆ.
ರಾಜ್ಯದಲ್ಲಿ ಎರಡು ಹಂತದ ಚುನಾವಣೆ ಇದೆ. ಯಾವುದೇ ಪಕ್ಷದ ಚಿನ್ಹೆ ಇರಲ್ಲ. ಚುನಾವಣೆಗೆ ಸ್ವರ್ಧಿಸಿರುವ ಅಭ್ಯರ್ಥಿಗಳು ಜನರಿಗೆ ನೀಡುವ ಭರವಸೆ ಈಡೇರಿಸಲೇಬೇಕು ಎಂದು ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ವಿಡಿಯೊ ಸಹ ವೈರಲ್ ಅಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.