ADVERTISEMENT

ದೊಡ್ಡಬಳ್ಳಾಪುರ: ‘ಪಠ್ಯೇತರ ಸಾಹಿತ್ಯಕ್ಕೂ ಒತ್ತು ನೀಡಿ’

‘ಕಾಮಕಸ್ತೂರಿ ಬನ’ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 5:18 IST
Last Updated 22 ಫೆಬ್ರುವರಿ 2023, 5:18 IST
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಉಪನ್ಯಾಸಕ ಡಾ. ಪ್ರಕಾಶ್‌ ಮಂಟೇದ ಅವರು ಬರೆದಿರುವ ‘ಕಾಮಕಸ್ತೂರಿ ಬನ’ ಕವನ ಸಂಕಲನವನ್ನು ಲೇಖಕ ಯೋಗೇಶ್‌ ಮಾಸ್ಟರ್ ಬಿಡುಗಡೆ ಮಾಡಿದರು. ಚಿಂತಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಇದ್ದರು
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಉಪನ್ಯಾಸಕ ಡಾ. ಪ್ರಕಾಶ್‌ ಮಂಟೇದ ಅವರು ಬರೆದಿರುವ ‘ಕಾಮಕಸ್ತೂರಿ ಬನ’ ಕವನ ಸಂಕಲನವನ್ನು ಲೇಖಕ ಯೋಗೇಶ್‌ ಮಾಸ್ಟರ್ ಬಿಡುಗಡೆ ಮಾಡಿದರು. ಚಿಂತಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಇದ್ದರು   

ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಉಪನ್ಯಾಸಕ ಡಾ. ಪ್ರಕಾಶ್ ಮಂಟೇದ ಬರೆದ ‘ಕಾಮಕಸ್ತೂರಿ ಬನ’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ಚಿಂತಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಮಾತನಾಡಿ, ‘ವಿದ್ಯಾರ್ಥಿಗಳು ಸಾಹಿತ್ಯ ಓದುವುದನ್ನೇ ನಿರ್ಲಕ್ಷಿಸುತ್ತಿದ್ದಾರೆ. ಇತಿಹಾಸದ ನೈಜ ಪುಟಗಳನ್ನು ಓದದೆ, ಸದಾ ಮೊಬೈಲ್ ಬಳಕೆಯಲ್ಲಿ ತೊಡಗಿ, ನಕಲಿ ಹೋರಾಟಗಾರರ ಗುಂಪಿಗೆ ಸೇರುತ್ತಿರುವುದು ಶೋಚನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಠ್ಯ ಪುಸ್ತಕಗಳೊಂದಿಗೆ ಕಥೆ, ಕಾದಂಬರಿ, ಕವನ ಇತ್ಯಾದಿ ಸಾಹಿತ್ಯ ಪ್ರಕಾರದ ಪುಸ್ತಕಗಳ ಓದಿನಿಂದ ಜ್ಞಾನ ವೃದ್ಧಿಸಿಕೊಳ್ಳಬೇಕು. ಉತ್ತಮ ಚಿಂತನೆ, ಆಲೋಚನೆಗಳು ಬೆಳೆಯಲು ಪಠ್ಯದಾಚೆಗಿನ ಓದು ಬಹುಮುಖ್ಯ. ಪಠ್ಯದ ಓದು ಅಂಕ ಗಳಿಸಿಕೊಟ್ಟರೆ, ಪಠ್ಯದಾಚೆಗಿನ ಓದು ನಮ್ಮ ಬದುಕನ್ನು ರೂಪಿಸುತ್ತದೆ. ಸಮಾಜದಲ್ಲಿ ಒಬ್ಬ ಸಭ್ಯ ಮನುಷ್ಯನನ್ನಾದಿ ರೂಪಿಸುತ್ತದೆ’ ಎಂದರು.

ADVERTISEMENT

ಲೇಖಕ ಯೋಗೇಶ್‌ಮಾಸ್ಟರ್ ಮಾತನಾಡಿ, ‘ಉತ್ತಮ ಆಲೋಚನೆ, ಪ್ರಸ್ತುತ ಸಮಾಜದಲ್ಲಿನ ವಿಷಯಗಳಿಗೆ ಮುಖಾಮುಖಿಯಾಗುವ ವಿಷಯಗಳ ಮೇಲೆ ಕಾಮಕಸ್ತೂರಿ ಬನ ಕವನ ಸಂಕಲನ ಬೆಳಕು ಚಲ್ಲುತ್ತದೆ. ‘ಕಾಮ’ ಎನ್ನುವ ಪದ ಕೇಳಿದೊಡನೆ ಜನ ಸಾಮಾನ್ಯರ ದೃಷ್ಟಿ ಬೇರೆಯದ್ದೇ ಆಗಿರುತ್ತದೆ. ಕಾಮ ಎಂದರೆ ಅಸಹ್ಯ ಪಡುವ ಪದವಾಗಿ ಪರಿವರ್ತನೆಯಾಗಿರುವುದು ದುರದೃಷ್ಟಕರ. ಕಾಮ ಎಂದರೆ ಆಸೆ ಅಥವಾ ಬಯಕೆ ಎಂದರ್ಥ’ ಎಂದು ಹೇಳಿದರು.

ತಮ್ಮ ಬಾಲ್ಯ ಜೀವನದ ನೈಜ ಘಟನೆಗಳನ್ನು ತಾವು ಅನುಭವಿಸಿದ ಯಾತನೆಗಳೊಂದಿಗೆ ಕೆಲ ಪ್ರೇಮ ಪುರಾಣಗಳು, ಹೋರಾಟ, ದೇಶಭಕ್ತಿಯ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ಹೇರುತ್ತಾ ಸಂಘರ್ಷಗಳ ಕುರಿತಾದ ಸಾಕಷ್ಟು ವಿಚಾರದಾರೆಯನ್ನು ಕವಿತೆಗಳು ಅಭಿವ್ಯಕ್ತಿಗೊಳಿಸಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಸದಾಶಿವ ರಾಮಚಂದ್ರಗೌಡ ವಹಿಸಿದ್ದರು. ಕವನ ಸಂಕಲನ ಪ್ರಕಾಶಕಿ ಡಾ. ಮಮತಾ, ಲೇಖಕ ಡಾ. ಪ್ರಕಾಶ್‌ ಮಂಟೇದ, ಹಿರಿಯ ಕನ್ನಡ ಪರ ಹೋರಾಟಗಾರ ಸಂಜೀವ್‌ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.