ದೇವನಹಳ್ಳಿ: ನಾಗರಿಕರಿಗೆ ತೆರಿಗೆ ವಿಧಿಸಿದೆ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಂಪನ್ಮೂಲ ಕ್ರೂಡೀಕರಣಕ್ಕೆ ಒತ್ತು ನೀಡಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ ಸಲಹೆ ನೀಡಿದರು.
ಪುರಸಭೆ ಸಭಾಂಗಣದಲ್ಲಿ 2019–20ನೇ ಸಾಲಿನ ಪುರಸಭೆ ಆಯವ್ಯಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪುರಸಭೆಗೆ ಎಸ್.ಎಫ್.ಸಿ ವ್ಯಾಪ್ತಿಯ ಅನುದಾನದ, ಮುಕ್ತನಿಧಿ, ಕುಡಿಯುವ ಮತ್ತು ಪ್ರೋತ್ಸಾಹ ಧನ ಬರುತ್ತದೆ. 14ನೇ ಹಣಕಾಸು ಯೋಜನೆ ಅನುದಾನ ಮತ್ತು ಕಾರ್ಯಾಧರಿತ ಅನುದಾನ, ನಗರೋತ್ಧಾನ ಅನುದಾನ ಒಟ್ಟುಗೂಡಿಸಿದರೆ ಗರಿಷ್ಠ ₹9ರಿಂದ ₹10 ಕೋಟಿ ನಿರೀಕ್ಷಿಸಬಹುದು. ಪ್ರತಿಯೊಂದು ಮೂಲಸೌಲಭ್ಯಕ್ಕೆ ವಾರ್ಷಿಕ ಅನುದಾನ ಸಾಕಾಗುವುದಿಲ್ಲ. ಪುರಸಭೆ ಸ್ವತ್ತಿನ ಕಡೆ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿ ಮಾರುಕಟ್ಟೆ ಮೌಲ್ಯದಂತೆ ಬಾಡಿಗೆ ಪಡೆಯುವುದು ಅನಿವಾರ್ಯ ಎಂದು ತಿಳಿಸಿದರು
ಸ್ಥಳೀಯರಾದ ಅಶ್ವಿನಿ ಮಾತನಾಡಿ, 8ರಿಂದ 10 ದಿನಗಳಿಗೊಮ್ಮೆ ಬಳಕೆ ನೀರು ಪೂರೈಕೆ ಮಾಡುತ್ತಿರುವುದರಿಂದ ಚರಂಡಿಯಲ್ಲಿನ ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದೆ ಎಂದು ಹೇಳಿದರು.
ಗ್ರಾಮೀಣ ಮಹಿಳಾಭಿವೃದ್ಧಿ ಸಂಸ್ಥೆ ಸೂರ್ಯ ಕಲಾಮೂರ್ತಿ ಮಾತನಾಡಿ, ದೇವನಹಳ್ಳಿ ಪುರಸಭೆ ಆರಂಭವಾದ ದಿನದಿಂದ ಇದುವರೆಗೂ ಕಸ ವಿಲೇವಾರಿ ದಾಸ್ತಾನು ಘಟಕಕ್ಕೆ ಜಾಗ ನಿಗದಿಯಾಗಿಲ್ಲ. ಬೀದಿ ಕಸ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ಸಭೆ ಗಮನಕ್ಕೆ ತಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ನಾಗರಾಜಯ್ಯ ಮಾತನಾಡಿ, ಪ್ರವಾಸಿ ಮಂದಿರದಿಂದ ಹೊಸ ಬಸ್ ನಿಲ್ದಾಣದವರೆಗೆ ರಸ್ತೆ ಬದಿಯಲ್ಲಿ ಮಾಂಸದಂಗಡಿ ವಹಿವಾಟು ನಡೆಸುತ್ತಾರೆ. ಇದರ ತ್ಯಾಜ್ಯಕ್ಕಾಗಿ ನಾಯಿಗಳ ಹಿಂಡು ಹೆಚ್ಚುತ್ತಿದ್ದು ಪಾದಚಾರಿಗಳಿಗೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ತೆರಿಗೆ ಏರಿಕೆ ಮಾಡಿಲ್ಲ. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಕಾರ್ಮಿಕರ ಕೊರತೆ ನಡುವೆ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಉಪಾಧ್ಯಕ್ಷೆ ಅಶಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪುರಸಭೆ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.