ಹೊಸಕೋಟೆ: ‘ಅಸಂಘಟಿತ ಅಡುಗೆ ಕಾರ್ಮಿಕರಿಗೆ ಮತ್ತು ಸಹಾಯಕರಿಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ಬಹಳ ತೊಂದರೆಯಾಗಿದೆ. ಅಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಮತ್ತು ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯ ಒದಗಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ, ಹೊಸಕೋಟೆ ತಾಲ್ಲೂಕು ಅಸಂಘಟಿತ ಅಡುಗೆ ಕಾರ್ಮಿಕರ ಸೇವಾ ಟ್ರಸ್ಟ್ ಪ್ರಾರಂಭಿಸಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ ವೈ.ಜೆ. ಮುರಳೀಧರ್ ತಿಳಿಸಿದರು.
ನಗರದ ಮಿಲನ ಕಲ್ಯಾಣ ಮಂಟಪದಲ್ಲಿ ನಡೆದ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚ್ಚಿದಾನಂದ ಅದ್ವೈತ ಸರಸ್ವತಿ ಸ್ವಾಮೀಜಿ ಮಾತನಾಡಿ, ಅಡುಗೆಯವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಒಳ್ಳೆಯ ಊಟದಿಂದ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ಅಡುಗೆಯವರು ಶುಚಿತ್ವ ಕಾಪಾಡಬೇಕು. ಜೊತೆಗೆ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಕರ್ನಾಟಕ ಅಡುಗೆ ಕೆಲಸದವರ ಹಾಗೂ ಸಹಾಯಕ ಕೆಲಸಗಾರರ ಕ್ಷೇಮಾಭಿವೃದ್ಧಿ ಯೂನಿಯನ್ ಕಾರ್ಯದರ್ಶಿ ರಮೇಶ ಬಾಬು ಮಾತನಾಡಿ, 2003ರಲ್ಲಿ ಪ್ರಾರಂಭವಾದ ಸಂಘಟನೆಯು ಈಗ ರಾಜ್ಯ ವ್ಯಾಪಿ ಬೆಳೆದಿದೆ. ಬಹಳಷ್ಟು ಅಡುಗೆಯವರು ಸದಸ್ಯರಾಗಿದ್ದಾರೆ ಎಂದರು.
ಉಲಿಚಿಕಂಬಿ ಬ್ರಾಹ್ಮಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ. ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಅಡುಗೆಯವರು ಅಸಂಘಟಿತರಲ್ಲ. ನಾವು ಸಮಾಜಕ್ಕೆ ಅನ್ನದಾತರು ಎಂದರು.
ಸಂಘದ ಕಡೆಯಿಂದ ಅಡುಗೆಯವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ಸಹಾಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್, ರಾಜ್ಯ ಗೌರವಾಧ್ಯಕ್ಷ ಸುರೇಶ್, ತಾಲ್ಲೂಕು ಬ್ರಾಹ್ಮಣ ಜಾಗೃತ ವೇದಿಕೆಯ ಗೌರವಾಧ್ಯಕ್ಷ ಬಿ.ಪಿ. ಶ್ರೀನಿವಾಸಯ್ಯ ಹಾಗೂ ಸಂಘದ ಸದಸ್ಯರುಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.