ದೇವನಹಳ್ಳಿ: ‘ಮುಂಗಾರು ಹಂಗಾಮಿನಲ್ಲಿ ಕೈಕೊಟ್ಟ ವಾಡಿಕೆ ಮಳೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ನಂದಿನಿ ವೆಂಕಟೇಶ್ ಹೇಳಿದರು.
ಇಲ್ಲಿನ ಕೊಯಿರಾ ಗ್ರಾಮದ ರೇಷ್ಮೆ ಬೆಳೆಗಾರ ಚಿಕ್ಕೆಗೌಡರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಮಾತನಾಡಿದ ಅವರು, ‘ಜೀವ ಜಲವಿಲ್ಲದೆ ಯಾವುದೇ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ. ಕೊಳವೆ ಬಾವಿಗಳಲ್ಲಿನ ಅಂತರ್ಜಲ ಕುಸಿತದಿಂದ ರೈತರ ಬದುಕು ದುಸ್ತರವಾಗುತ್ತಿದೆ. ಅನೇಕ ರೇಷ್ಮೆ ಬೆಳೆಗಾರರು ಹಿಪ್ಪು ನೇರಳೆ ಸೊಪ್ಪು ಪಶುಗಳಿಗೆ ಮೇವಿಗಾಗಿ ಕಟಾವು ಮಾಡುತ್ತಿದ್ದಾರೆ. ರೇಷ್ಮೆ ಗೂಡಿನ ಬೆಲೆ ಕುಸಿತ ಕಂಡಿದೆ. ರೇಷ್ಮೆ ಇಲಾಖೆಯಲ್ಲಿ ಆನೇಕ ಪ್ರೋತ್ಸಾಹದಾಯಕ ಯೋಜನೆಗಳಿವೆ ಅಂತರ್ಜಲದ ಕೊರತೆಯಿಂದ ರೈತರು ಮುಂದೆ ಬರುತ್ತಿಲ್ಲ’ ಎಂದು ಹೇಳಿದರು.
ಬೆಂಗಳೂರು ನಗರದ ನಾಗವಾರ ಮತ್ತು ಹೆಬ್ಬಾಳ ಕೆರೆ ತ್ಯಾಜ್ಯ ನೀರು ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸುವ ಯೋಜನೆಗೆ ಸಚಿವ ಕೃಷ್ಣಭೈರೇಗೌಡರವರು ಬೆಂಗಳೂರು ನಗರದ ಬಾಗಲೂರು ಕೆರೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಪರಿಶೀಲಿಸಿದ್ದಾರೆ. ಬಾಗಲೂರಿನಿಂದ ದೇವನಹಳ್ಳಿಗೆ ಹದಿನೈದು ಕಿಲೋಮೀಟರ್ ದೂರ ಇರುವುದರಿಂದ ಶೀಘ್ರವಾಗಿ ತಾಲ್ಲೂಕಿನ ಕೆರೆಗಳಿಗೆ ಪೈಪ್ ಮೂಲಕ ಹರಿಯುವ ಸಾಧ್ಯತೆ ಇದೆ. ರೈತರು ಅತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
‘ಹಿಪ್ಪು ನೇರಳೆ ಸೊಪ್ಪಿನ ತೋಟ ಉತ್ತಮವಾಗಿ ಬೆಳೆದಿದೆ. ಈಗಾಗಲೇ ರೈತ ಸೊಪ್ಪು ಮಾರಾಟ ಮಾಡಿದ್ದಾರೆ. ಸಾಲುಕಡ್ಡಿ ಪದ್ಧತಿ ಅಳವಡಿಸುವುದಕ್ಕಿಂತ ಮರಕಡ್ಡಿ ಪದ್ಧತಿಯಲ್ಲಿ ಬೆಳೆಸಿದರೆ ಒಂದೆರಡು ವರ್ಷ ಕಡಿಮೆ ಬೆಳೆಯಾದರೂ ನಂತರ ಉತ್ತಮ ಬೆಳೆಯಾಗಲಿದೆ. ನೀರಿನ ಮಿತ ಬಳಕೆಗೂ ಅನುಕೂಲವಾಗಲಿದೆ’ ಎಂದು ಹೇಳಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ರೇಷ್ಮೆ ಬೆಳೆ ತಾಂತ್ರಿಕ ವಿಸ್ತರಣಾಧಿಕಾರಿ ಶ್ರೀನಿವಾಸ್, ರೇಷ್ಮೆ ಇಲಾಖೆ ವಲಯ ಅಧಿಕಾರಿ ಮುನಿರಾಜು, ರೈತ ಚಿಕ್ಕೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.