ರಾಮನಗರ: ಹಾಸನದ ಹೊಂಬಾಳೆ ಕಲಾ ತಂಡದವರು ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ಜನಪದ ಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
‘30 ವರ್ಷಗಳಿಂದ ಜನಪದ ಗೀತೆಗಳನ್ನು ಹಾಡುತ್ತಿದ್ದೇನೆ. ತಾಯಿ ತಿಮ್ಮಾಜಮ್ಮ, ಸೋದರ ಮಾವ ಮುಂಡಯ್ಯ ಅವರಿಂದ ಜನಪದ ಗೀತೆಗಳನ್ನು ಕಲಿತುಕೊಂಡೆ. ವೃತ್ತಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿದ್ದರೂ ಜನಪದವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ನಿರಂತರವಾಗಿ ಹಾಡುತ್ತಿದ್ದೇನೆ, ಜತೆಗೆ ಜನಪದ ಗೀತೆಗಳನ್ನು ಸಂಗ್ರಹಿಸುತ್ತಿದ್ದೇನೆ’ ಎಂದು ಗಾಯಕ ದೊಡ್ಡಳ್ಳಿ ರಮೇಶ್ ತಿಳಿಸಿದರು.
‘ಸೋಬಾನೆ ಪದಗಳು, ಬಂಡಿ ಹಾಡು, ಚೌಡಿಕೆ, ಕೋಲಾಟ, ತಂಬೂರಿ ಹಾಡು, ಮಲೇಮಹದೇಶ್ವರ, ಮಂಟೇಸ್ವಾಮಿ ಹಾಡುಗಳು ಸೇರಿದಂತೆ ನೂರಾರು ಹಾಡುಗಳನ್ನು ಹಾಡುತ್ತೇನೆ. ಜನಪದ ಗೀತೆಗಳ ಗಾಯನಕ್ಕೆ ಈಗಲೂ ಬೇಡಿಕೆ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯಾಗುವಂತೆ ಜನಪದ ಗಾಯನ ಕ್ಷೇತ್ರದಲ್ಲಿಯೂ ಬದಲಾವಣೆಯಾಗುತ್ತಿದೆ’ ಎಂದು ತಿಳಿಸಿದರು.
‘ಹಾಸನದಲ್ಲಿ ಜನಪದ ಶಾಲೆ ತೆರೆದು ಉಚಿತವಾಗಿ ಆಸಕ್ತರಿಗೆ ಜನಪದ ಗೀತೆಗಳನ್ನು ಕಲಿಸಿಕೊಡುತ್ತಿದ್ದೇನೆ. ಎಚ್.ಎಲ್. ನಾಗೇಗೌಡ, ಎಸ್.ಕೆ.ಕರೀಂಖಾನ್, ಮತಿಘಟ್ಟ ಕೃಷ್ಣಮೂರ್ತಿ ಹೆಸರಿನಲ್ಲಿ ಪ್ರತಿ ವರ್ಷ ಉದಯೋನ್ಮುಖ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿದ್ದೇನೆ. ಆದರೆ, ಜನಪದ ಗೀತೆಗಳು ಬದಲಾಗುತ್ತಿರುವುದು ಬೇಸರ ತರಿಸಿದೆ’ ಎಂದು ತಿಳಿಸಿದರು.
ಗಾಯಕರಾದ ಮಾದೇವ, ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.