ಆನೇಕಲ್: ಗ್ರಾಮ ಪಂಚಾಯಿತಿ ಸದಸ್ಯರು ಬದ್ಧತೆಯಿಂದ ದುಡಿದರೆ ಅಭಿವೃದ್ಧಿ ಸಾಧ್ಯ ಎಂದು ಗ್ರಾಮ ಪಂಚಾ ಯಿತಿ ಸದಸ್ಯ ಜಯಶಂಕರ್ ತಿಳಿಸಿದರು.
ಅವರು ತಾಲ್ಲೂಕಿನ ಯಮರೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನೆ ಮತ್ತು ಕೊರೊನಾ ವಾರಿಯರ್ಸ್ಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಮರೆ ಗ್ರಾಮ ಪಂಚಾಯಿತಿಯಲ್ಲಿ ಪಕ್ಷ ಬೇಧವಿಲ್ಲದೇ ಎಲ್ಲಾ ಸದಸ್ಯರು ಕೆಲಸ ಮಾಡಿದ್ದರಿಂದ ಕಳೆದ ಐದು ವರ್ಷಗಳಲ್ಲಿ ₹ 30 ಕೋಟಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ. ಕಂದಾಯದ ಸಂಗ್ರಹಣೆ ವಿಷಯದಲ್ಲಿ ಯಾವುದೇ ಸದಸ್ಯರು ರಾಜೀ ಮಾಡಿಕೊಳ್ಳದೇ ಪಾರದರ್ಶಕವಾಗಿ ಕಂದಾಯ ವಸೂಲಿಗೆ ಸಹಕರಿಸಿದ್ದರಿಂದ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯ ಬರುವಂತಾಯಿತು. ರಸ್ತೆ, ಚರಂಡಿ, ಶಾಲೆಗಳ ಅಭಿವೃದ್ಧಿ, ನೂತನ ಪಂಚಾಯಿತಿ ಕಟ್ಟಡ, ಕಸ ವಿಲೇವಾರಿಗೆ ಟ್ರ್ಯಾಕ್ಟರ್ ಖರೀದಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಮೂಲಕ ಮತದಾರರ ಋಣ ತೀರಿಸಲು ಸಾಧ್ಯವಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಮಾತನಾಡಿ, ‘ಐದು ವರ್ಷದ ಆಡಳಿತದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡಲು ಸಾಧ್ಯವಾಗಿದೆ. ರಾಜಕೀಯಕ್ಕೆ ಅವಕಾಶವಿಲ್ಲದೇ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ.ಟಿ.ವಿ.ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ವಿಜಯ್ಕುಮಾರ್, ಉಪಾಧ್ಯಕ್ಷ ಚಿನ್ನಯ್ಯ, ಮುಖಂಡರಾದ ಸುಶೀಲಮ್ಮ, ಸೋಂಪುರ ಕೆಂಪಣ್ಣ, ಭಾಸ್ಕರ್, ಸಂಪಂಗಿ, ಶ್ರೀನಿವಾಸರೆಡ್ಡಿ, ಶಂಕರ್, ಸುಬ್ರಮಣಿ, ಸುನಂದಮ್ಮ, ಸುಧಾ, ಶಾಂತಮ್ಮ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಂಜಾರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.