ADVERTISEMENT

ಸಮಸ್ಯೆ ಬಗೆಹರಿಸದಿದ್ದರೆ ಅನಿರೀಕ್ಷಿತ ರಜೆ: ಎಂ.ವಿಜಯಕುಮಾರ್

ನೌಕರರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 13:28 IST
Last Updated 18 ಜನವರಿ 2020, 13:28 IST
ಕಾರ್ಯಕ್ರಮದಲ್ಲಿ ನಿವೃತ್ತಿಯಂಚಿನಲ್ಲಿರುವ ನೌಕರರಿಗೆ ಸಂಘದವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತಿಯಂಚಿನಲ್ಲಿರುವ ನೌಕರರಿಗೆ ಸಂಘದವತಿಯಿಂದ ಸನ್ಮಾನಿಸಲಾಯಿತು.   

ದೇವನಹಳ್ಳಿ: ರಾಜ್ಯ ಸರ್ಕಾರಿ ನೌಕರರ ಸಮಸ್ಯೆ ತ್ವರಿತವಾಗಿ ಬಗೆಹರಿಸದಿದ್ದರೆ ಅನಿರೀಕ್ಷತ ರಜೆಯ ಮೇಲೆ ತೆರಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿಜಯಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಇಲಾಖೆ ಸಭಾಂಗಣದಲ್ಲಿ ಸಂಘದ ವತಿಯಿಂದ 2020ನೇ ಸಾಲಿನ ದಿನಚರಿ ಬಿಡುಗಡೆ, ನಿವೃತ್ತಿಯಂಚಿನಲ್ಲಿರುವ ನೌಕರರಿಗೆ ಸನ್ಮಾನ ಮತ್ತು ನೌಕರರ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮ ಲೆಕ್ಕಾಧಿಕಾರಿಯಿಂದ ಸೇವೆಯಲ್ಲಿ ನಿರತರಾಗಿ, ರಾಜಸ್ವ ನಿರೀಕ್ಷರಾಗಿ ನಂತರ ಗ್ರೇಡ್‌ –2 ತಹಶೀಲ್ದಾರ್‌ಗಳಾಗಿ ಬಡ್ತಿ ಹೊಂದುವ ವಿಷಯದಲ್ಲಿ ವಿಭಾಗವಾರು ನೀಡಿರುವ ಪಟ್ಟಿಯಲ್ಲಿ ಗೊಂದಲಗಳಿವೆ. ಒಂದೊಂದು ವಿಭಾಗದಿಂದ ಒಂದು ರೀತಿಯ ವರದಿ ನೀಡಿದರೆ ಬಡ್ತಿ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ADVERTISEMENT

ಕಳೆದ ವರ್ಷ ರಾಜ್ಯಮಟ್ಟದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಗ್ರಾಮ ಲೆಕ್ಕಿಗರ ಸಹಾಯಕರಿಗೆ ಸೇವಾ ಭದ್ರತೆ ದೃಷ್ಟಿಯಿಂದ ಕಾಯಂ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಆರು ಬೇಡಿಕೆ ಈಡೇರಿಸುವ ಭರವಸೆ ಇದೆ. ಈಡೇರದಿದ್ದರೆ ಮುಂದಿನ ಹೋರಾಟದ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ ಮಾತನಾಡಿ, ‘ನಿವೃತ್ತಿಯಾಗಿರುವ ಮತ್ತು ನಿವೃತ್ತಿಯಂಚಿನಲ್ಲಿರುವ ನೌಕರರು, ನೂತನ ನೌಕರರಿಗೆ ತಮ್ಮ ಸೇವಾ ಅನುಭವವನ್ನು ಒಂದು ಕಿರುಹೊತ್ತಿಗೆ ತಯಾರಿಸಿ ನೀಡಿದರೆ ಹೆಚ್ಚಿನ ಅನುಕೂಲ. ಬದಲಾವಣೆಗೆ ಒಗ್ಗಿಕೊಳ್ಳಬೇಕು. ಗ್ರಾಮ ಲೆಕ್ಕಿಗರು ಅನ್ನುವುದಕ್ಕಿಂತ ಗ್ರಾಮ ಸಮನ್ವಯಾಧಿಕಾರಿಯಾಗಿ ಕೆಲಸ ಮಾಡಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ನೌಕರರು ಮುಖಮುಖಿಯಾಗಿ ಚರ್ಚಿಸಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ನೌಕರರಿಗೆ ದಿನಚರಿ ಅತ್ಯಂತ ಮುಖ್ಯ, ನೌಕರರಲ್ಲಿ ಪ್ರತಿಭೆ ಇದೆ, ಶ್ರಮ, ಸಮಯ ಪ್ರಜ್ಞೆಯ ಜಾಗೃತೆವಹಿಸಬೇಕು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಕಂದಾಯ ಇಲಾಖೆ ನೌಕರರಿಗೆ ವೈಯಕ್ತಿ ಬದುಕು ಕಡಿಮೆಯಾಗುತ್ತಿದೆ ಎಂದು ಹೇಳಿದರು. ಕರ್ತವ್ಯ ನಿರ್ವಹಣೆ ಜೊತೆಗೆ ಶಿಕ್ಷಣ ಮುಂದುವರಿಸಿ ಸ್ವರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಿ, ಪ್ರತಿಭೆ ಯಾರ ಸ್ವತ್ತು ಅಲ್ಲ, ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕೋಡಿಸಿ, ವಾರ್ಷಿಕ ಕಂದಾಯ ದಿನಾಚರಣೆ ಆಚರಿಸುವ ಚಿಂತನೆ ಇದೆ, ಕಂದಾಯ ಇಲಾಖೆ ನೌಕರರ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಜ.27 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮವಿರುವುದರಿಂದ 94c ಮತ್ತು 94 cc ಅಡಿ ಫಲಾನುಭವಿಗಳನ್ನು ಗುರುತಿಸಿ ಹಕ್ಕು ಪತ್ರ ಸಿದ್ದಗೊಳಿಸಿ ಫಲಾನುಭವಿಗಳ ಜೊತೆಯಲ್ಲೆ ಕಾರ್ಯಕ್ರಮದ ಸ್ಥಳಕ್ಕೆ ಹಾಜರಿರಬೇಕು ಎಂದು ಸೂಚಿಸಿದರು. ಕಂದಾಯ ಇಲಾಖೆ ನೌಕರರ ಸಂಘ ರಾಜ್ಯ ಘಟಕ ಅಧ್ಯಕ್ಷ ಕೃಷ್ಣಮೂರ್ತಿ ಗ್ರಾಮ ಲೆಕ್ಕಗರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಪಿ.ಕಮಲೇಶ್, ಉಪವಿಭಾಗಾಧಿಕಾರಿ ಮಂಜುನಾಥ್, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮೈಕಲ್ ಬೆಂಜಮಿನ್, ಎಂ.ಬಾಲಕೃಷ್ಣ, ಕೆ.ಎಂ.ಮಂಜುಳಾ, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಮಹೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.