ದೇವನಹಳ್ಳಿ: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸ್ಮಶಾನದ ಜಾಗ ಒತ್ತುವರಿಯಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಮೇಲೆ ಪಾಳು ಕೊಂಪೆಯಾಗಿದ್ದ ಸ್ಮಶಾನ, ಗೋಮಾಳ, ಖರಾಬು ಸರ್ಕಾರಿ ಜಾಗದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನಗರ ಪ್ರದೇಶದ ಮುಖ್ಯ ರಸ್ತೆಯಲ್ಲಿ ಚದರಡಿ ₹2ಸಾವಿರದಿಂದ ₹6ಸಾವಿರದವರೆಗೆ ಇದೆ. ಒತ್ತುವರಿದಾರರಿಗೆ ಕಡಿವಾಣ ಹಾಕುವವರು ಯಾರು ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸ್ಮಶಾನ ಇರುವ ಬಹುತೇಕ ಜಾಗದಲ್ಲಿ ಮೃತರ ನೆನಪಿಗಾಗಿ ನಿರ್ಮಾಣ ಮಾಡಿರುವ ಸಮಾಧಿಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ನೆಲಸಮ ಮಾಡಲಾಗಿದೆ. ರಾತ್ರೋರಾತ್ರಿ ತಡೆಗೋಡೆ ನಿರ್ಮಾಣ ಮಾಡಿಕೊಂಡು ಅತಿಕ್ರಮ ಪ್ರವೇಶ ಮಾಡಲಾಗಿದೆ. ಸತ್ತವರನ್ನು ಹೂಳಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ಅಳಲು.
‘ಸರ್ಕಾರ 2016ರಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಸರ್ಕಾರಿ ಜಾಗ, ಗೋಮಾಳ, ರಾಜ ಕಾಲುವೆ, ಕೆರೆಯಂಗಳ ಮತ್ತು ಸ್ಮಶಾನ ಒತ್ತುವರಿ ತೆರವುಗೊಳಿಸಿ ಸ್ಮಶಾನ ಮತ್ತು ಕೆರೆಯಂಗಳ ಹದ್ದುಬಸ್ತು ಮಾಡಿ ತಂತಿಬೇಲಿ ತಡೆಗೋಡೆ ನಿರ್ಮಿಸುವಂತೆ ಭೂಮಾಪನ ಇಲಾಖೆ ಹಾಗೂ ಸ್ಥಳೀಯ ಪುರಸಭೆ ಹಾಗೂ ನಗರ ಸಭೆಗಳಿಗೆ ಆದೇಶ ಮಾಡಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ನಾಲ್ಕಾರು ದಿನ ಒತ್ತುವರಿ ಜಾಗಗಳ ಆಳತೆ ಮಾಡಿ ಕೈಬಿಟ್ಟಿರುವುದು ಹೊರತುಪಡಿಸಿದರೆ ನಂತರ ಯಾವುದೇ ತೆರವು ಕಾರ್ಯಾಚರಣೆ ನಡೆಸಿಲ್ಲ. ಅಧಿಕಾರಿಗಳ ಕಣ್ಮಂದೆಯೇ ಒತ್ತುವರಿಯಾಗುತ್ತಿದ್ದರೂ ಕಡಿವಾಣ ಹಾಕುವ ಪ್ರಯತ್ನ ನಡೆದಿಲ್ಲ. ಇದರಲ್ಲಿ ಭೂಮಾಫಿಯಾ ಕೈವಾಡ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಣದ ದುರಾಸೆಗಾಗಿ ಸಾರ್ವಜನಿಕರಿಗೆ ಮೀಸಲಿಟ್ಟ ಸ್ಮಶಾನ ಜಾಗ ಅಪೋಶನ ಮಾಡುತ್ತಾ ಹೋದರೆ ಭವಿಷ್ಯದಲ್ಲಿ ಮೃತರನ್ನು ಪೌರಕಾರ್ಮಿಕರು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು. ದೇವನಹಳ್ಳಿ ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧೆಡೆ ಇರುವ ರುದ್ರಭೂಮಿ ವಿಸ್ತೀರ್ಣ 800ಎಕರೆಗೂ ಹೆಚ್ಚು ಎಂದು ಸಂಬಂಧಿಸಿದ ಇಲಾಖೆ ದಾಖಲೆಗಳಲ್ಲಿ ನಮೂದು ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.