ದೇವನಹಳ್ಳಿ: ರೈತ ಸಂಘದಿಂದ ಸರ್ಕಾರಿ ಭೂಮಿ ಮತ್ತು ಗೋಮಾಳ ರಕ್ಷಣೆಗಾಗಿ ಪಾದಾಯತ್ರೆ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ವಿಮಾನ ನಿಲ್ದಾಣದ ಸಮೀಪ ಇರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯ ಮುಂಭಾಗ ಶನಿವಾರ ರೈತರು ಧೃಡಸಂಕಲ್ಪದ ಪ್ರತಿಜ್ಞಾವಿಧಿ ಸ್ವೀಕರಿಸಿರು.
ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಅರಳಾಪುರ ಮಂಜೇಗೌಡ, ನಾಡಫ್ರಭು ಕೆಂಪೇಗೌಡರು ಬೆಂಗಳೂರು ನಗರದ ಸುತ್ತ ಮುತ್ತ ನಿರ್ಮಿಸಿದ್ದ ನೂರಾರು ಕೆರೆ, ನೀರಿನ ಮೂಲವನ್ನು ಭೂಗಳ್ಳರು ನುಂಗಿದ್ದಾರೆ. ಇದರ ವಿರುದ್ಧ ಹೋರಾಡಬೇಕಿದೆ. ಇದೇ ರೀತಿ ವಿವಿಧ ಜಿಲ್ಲೆಗಳಲ್ಲಿ ಗೋಮಾಳ, ರಾಜಕಾಲುವೆ ಒತ್ತುವಾರಿ ವಿರುದ್ಧ ಹೋರಾಟ ನಡೆಸಲಾಗುವುದು ತಿಳಿಸಿದರು.
ಗೋಮಾಳ ರಕ್ಷಣೆ ಮಾಡಿ ಎಂದು ಅಧಿಕಾರಿ ಮತ್ತು ರಾಜಕೀಯ ಪ್ರತಿನಿಧಿಗಳಲ್ಲಿ ಮನವಿ ಮಾಡಿದರೇ ಹಾರಿಕೆ ಉತ್ತರ ಕೊಡುತ್ತಾರೆ. ಒತ್ತುವರಿಯಿಂದ ಮೇಯಲು ಗೋಮಾಳ ಇಲ್ಲದೇ ಜಾನುವಾರು ಸಾಯುತ್ತಿದೆ. ಸುಗಮವಾಗಿ ಮಳೆ ನೀರು ಹರಿಯದಂತೆ ರಾಜಕಾಲುವೆಗಳನ್ನು ಒತ್ತುವರಿಯಾಗಿವೆ ಎಂದು ಆರೋಪಿಸಿದರು.
ರೈತ ಸಂಘದ ಯುವ ಘಟಕದ ರಾಜ್ಯಾದ್ಯಕ್ಷ ಬಿ.ಕೆ ವಿನೋದ ಕುಮಾರ, ದೇವನಹಳ್ಳಿ ತಾಲ್ಲೂಕಿನಲ್ಲಿ ಸಾಕಷ್ಟು ಭೂಗಳ್ಳರು ಇದ್ದಾರೆ. ಸರ್ಕಾರಿ ಜಾಗ ಲಪಟಾಯಿಸುವ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ, ಅವರು ಅಂತವರ ವಿರುದ್ಧ ಹೋರಾಟ ಮಾಡಿ ದಾಖಲೆ ಸಮೇತ ಸತ್ಯ ಬಯಲು ಮಾಡಲಾಗುವುದು ಎಂದು ತಿಳಿಸಿದರು.
ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗೌರವಾದ್ಯಕ್ಷ ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂಜುಂಡಪ್ಪ, ರಾಜ್ಯ ಸಂಚಾಲಕ ಚಂದ್ರು, ಚಿಕ್ಕಮಮಗಳೂರು ಜಿಲ್ಲಾಧ್ಯಕ್ಷ ಮುದ್ದೇಗೌಡ, ಚಿಕ್ಕಮಗಳೂರು ಅಧ್ಯಕ್ಷ ಸುಂದರೇಶಗೌಡ, ಹಾಸನ ಜಿಲ್ಲಾಧ್ಯಕ್ಷ ಪ್ರಕಾಶ್, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಜಯ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.