ADVERTISEMENT

ಮೆಟ್ರೊ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ: ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಫೀಡರ್ ಬಸ್ ಸೇವೆಯಿಂದ ಸಂಚಾರ ದಟ್ಟಣ ನಿಯಂತ್ರಣ: ಸಚಿವ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 1:59 IST
Last Updated 13 ಆಗಸ್ಟ್ 2025, 1:59 IST
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಬಿಎಂಟಿಸಿಯ ಮೆಟ್ರೊ ಫೀಡರ್ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಎಂ.ಕೃಷ್ಣಪ್ಪ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಬಿಎಂಟಿಸಿಯ ಮೆಟ್ರೊ ಫೀಡರ್ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಎಂ.ಕೃಷ್ಣಪ್ಪ ಚಾಲನೆ ನೀಡಿದರು   

ಆನೇಕಲ್: ಬೆಂಗಳೂರು ಮೆಟ್ರೊ ಸಂಪರ್ಕ ಬಲಪಡಿಸುವ ಉದ್ದೇಶದಿಂದ ತಾಲ್ಲೂಕಿನ ವಿವಿಧ ಭಾಗಗಳಿಂದ ಹಳದಿ ಮಾರ್ಗದ ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಬಿಎಂಟಿಸಿಯ ಮೆಟ್ರೊ ಫೀಡರ್ ಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಎಂ. ಕೃಷ್ಣಪ್ಪ ಮಂಗಳವಾರ ಚಾಲನೆ ನೀಡಿದರು. 

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹಳದಿ ಮಾರ್ಗದ ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಮೆಟ್ರೊ ಫೀಡರ್‌ ಬಸ್‌ಗಳನ್ನು ರೂಪಿಸಲಾಗಿದೆ. ಹಳದಿ ಮಾರ್ಗದಲ್ಲಿರುವ ಮೆಟ್ರೊ ನಿಲ್ದಾಣಗಳಿಗೆ ಬಿಎಂಟಿಸಿ ಮೆಟ್ರೊ ಫೀಡರ್‌ಗಳು ಸೇವೆ ನೀಡಲಿವೆ ಎಂದರು.

ಹೊಸರೋಡ್‌, ಬೆರಟೇನೆ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರಕ್ಕೆ ಫೀಡರ್‌ ಬಸ್‌ಗಳು ಸೇವೆ ನೀಡಲಿವೆ. ಇದರಿಂದ ಜನರು ಬಸ್‌ಗಾಗಿ ಕಾಯುವ ಸ್ಥಿತಿ ಇರುವುದಿಲ್ಲ. ಪ್ರತಿದಿನ 12 ಬಸ್‌ಗಳು 96 ಟ್ರಿಪ್‌ ಸಂಚಾರ ಮಾಡಲಿವೆ. ಮೆಟ್ರೊ ಸಂಚಾರ ಸುಗಮಗೊಳಿಸಲು ಬಿಎಂಟಿಸಿ ಕ್ರಮ ವಹಿಸಿದೆ ಎಂದರು.

ADVERTISEMENT

ಹಳದಿ ಮಾರ್ಗದಲ್ಲಿ 18 ನಿಲ್ದಾಣಗಳಿವೆ. ಈ ಪೈಕಿ 3 ನಿಲ್ದಾಣಗಳಿಗೆ ಬಸ್‌ ಸೇವೆ ಕಲ್ಪಿಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ನಿಲ್ದಾಣಗಳಿಗೂ ಫೀಡರ್ ಬಸ್ ಸೇವೆ ಕಲ್ಪಿಸಲಾಗುವುದು. ಮೆಟ್ರೊ ನಿಲ್ದಾಣಕ್ಕೆ ಸಮೀಪದ ಗ್ರಾಮಗಳು, ಪಟ್ಟಣಗಳಿಗೆ ಮೆಟ್ರೊ ಫೀಡರ್‌ಗಳ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಹಳದಿ ಮಾರ್ಗದ ಮೆಟ್ರೊ ಉದ್ಘಾಟನೆಯಾಗಿ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಫೀಡರ್‌ ಬಸ್‌ಗಳ ಬಳಕೆಯಿಂದ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದರು. 

ಸಾರಿಗೆ ಸೌಲಭ್ಯ ಬಳಸಿಕೊಳ್ಳಬೇಕು. ಇದರಿಂದ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶ ರಾಮಚಂದ್ರನ್‌, ಸಾರಿಗೆ ಇಲಾಖೆಯ ಎಂ.ಶಿಲ್ಪಾ, ಅಬ್ದುಲ್‌ ಅಹಾದ್‌, ಎಲೆಕ್ಟ್ರಾನಿಕ್‌ಸಿಟಿ ಅಸೋಸಿಯೇಷನ್‌ನ ಶ್ರೀರಾಮ್‌ ಇದ್ದರು.

ಬಿಜೆಪಿ ಬುರುಡೆ ಪಕ್ಷ

ರಾಜಣ್ಣ ಅವರ ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಅವರನ್ನು ಕೇಳಿ ಹೇಳುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸೆಪ್ಟೆಂಬರ್‌ ಕ್ರಾಂತಿ ಎಂಬುದು ಬಿಜೆಪಿಯ ಮಾತು. ಬಿಜೆಪಿಯು ಬುರುಡೆ ಪಕ್ಷ. ಸಿದ್ದರಾಮಯ್ಯ ಅವರಿಗೆ ಎಲ್ಲರೂ  ಆಪ್ತರಾಗಿದ್ದಾರೆ. ಸರ್ಕಾರದ ಎಲ್ಲ ಸಚಿವರು ಸಹ ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದಾರೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.