ದೇವನಹಳ್ಳಿ: ಪರಿಸರ ಕಾಳಜಿಯನ್ನಿಟ್ಟುಕೊಂಡು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಪರಿಸರವಾದಿಗಳಿಗೆ ಸನ್ಮಾನ ಮಾಡುವುದರಿಂದ ಮತ್ತಷ್ಟು ಪ್ರೇರಣೆಯಾಗಲಿದೆ ಎಂದು ಬಿ.ವಿ.ಕೆ ಗ್ರೂಪ್ನ ಮುಖ್ಯಸ್ಥ ಕೃಷ್ಣಪ್ಪ ಹೇಳಿದರು.
ಇಲ್ಲಿನ ಬೈಪಾಸ್ ಬಳಿ ಇರುವ ಬಿ.ವಿ.ಕೆ ಗ್ರೂಫ್ ಕಚೇರಿ ಬಳಿಯ ಪ್ರಕೃತಿ ಅಂಗಳದಲ್ಲಿ ಪರಿಸರವಾದಿ ಕೊಡಗುರ್ಕಿ ಕೆ.ಎನ್.ಮುನೇಗೌಡರಿಗೆ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಬೆರಣಿಕೆಯಷ್ಟು ಮಂದಿ ಮಾತ್ರ ಪರಿಸರದ ಬಗ್ಗೆ ಇತ್ತೀಚೆಗೆ ಕಾಳಜಿ ವಹಿಸುತ್ತಿದ್ದಾರೆ. ಪರಿಸರವಾದಿ ಮುನೇಗೌಡ ಅವರು 12 ವರ್ಷಗಳಿಂದ ಬೈಪಾಸ್ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ನೆಟ್ಟು ಪೋಷಿಸಿ ಸಂರಕ್ಷಣೆ ಮಾಡುತ್ತಿದ್ದಾರೆ. 400ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳನ್ನು ಬೆಳೆಸಿದ್ದಾರೆ ಎಂದರು.
ಮುನೇಗೌಡ ಮಾತನಾಡಿ, ‘2009 ರಲ್ಲಿ ಟ್ರ್ಯಾಕ್ಟರ್ ರಿಪೇರಿ ಮಾಡಿಸುತ್ತಿದ್ದ ಸಂದರ್ಭದಲ್ಲಿ ಗ್ಯಾರೇಜ್ ಮುಂದೆ ರಣಬಿಸಿಲು ತಡೆಯಲಾರದಷ್ಟು ಇತ್ತು, ಅಂದೇ ಗ್ಯಾರೇಜ್ ಮಾಲಿಕ ಮುನಿರಾಜುಗೆ ಸಲಹೆ ನೀಡಿ ಮಾರನೆ ದಿನ ಆರೇಳು ಸಸಿಗಳನ್ನು ನೆಟ್ಟು ನೀರು ಹಾಕಿ ಬೆಳೆಸಲು ಆರಂಭ ಮಾಡಿದೆ. ಅಂದಿನಿಂದ ವಾರ್ಷಿಕ 30 ರಿಂದ 40 ಸಸಿಗಳನ್ನು ರಸ್ತೆ ಬದಿಯಲ್ಲಿ ಖಾಲಿ ಇರುವ ಜಾಗದಲ್ಲಿ ಸಸಿನೆಟ್ಟು ಸುತ್ತ ಬೇಲಿ ಹಾಕಿ ಬೇಸಿಗೆಯಲ್ಲಿ ನೀರುಣಿಸಿದೆ. ಐದಾರು ದಿನಗಳಿಗೊಮ್ಮೆ ಸಸಿಗಳನ್ನು ಪರಿಶೀಲಿಸುತ್ತಿರುತ್ತೇನೆ ಎಂದು ಹೇಳಿದರು.
ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ನೆರಳಿನ ಮಹತ್ವ ಈಗ ಅರ್ಥವಾಗುತ್ತಿದೆ. ಜೀವನದಲ್ಲಿ ಪ್ರತಿಯೊಬ್ಬರು ಹತ್ತಾರು ಗಿಡ ಮರ ಬೆಳೆಸಿದರೆ ಸಾರ್ಥಕ ಸೇವೆಯಾಗಲಿದೆ. ಪ್ರತಿಯೊಬ್ಬರು ಪರಿಸರ ಪ್ರೇಮಿಗಳಾಗಬೇಕು ಎಂಬುದೇ ನನ್ನ ಆಶಯ ಎಂದರು. ಬಿ.ವಿ.ಕೆ ಗ್ರೂಪ್ ನ ಮುನಿರಾಜು, ಚನ್ನಕೇಶವ, ಚಿಕ್ಕಬಳ್ಳಾಪುರ ಮುನೇಗೌಡ, ಸೊಣ್ಣೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.