ದೊಡ್ಡಬಳ್ಳಾಪುರ: ಅಪಘಾತ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ಅರಿವಿಲ್ಲದೆಯೇ ಕೈಗೊಳ್ಳುವ ನಿರ್ಧಾರಗಳು ವ್ಯಕ್ತಿಗಳ ಪ್ರಾಣಕ್ಕೆ ಸಂಚಕಾರ ತರಬಹುದು. ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ಕನಿಷ್ಟ ವಿಚಾರಗಳನ್ನು ಎಲ್ಲರೂ ತಿಳಿಯಬೇಕಿದೆ ಎಂದು ಖ್ಯಾತ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಹೇಳಿದರು.
ಲೋಕ ಸೇವಾನಿರತ ಕೊಂಗಾಡಿಯಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಮುಖ್ಯರಸ್ತೆಯ ನೇಯ್ಗೆ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರಾಮ ಆಸ್ಪತ್ರೆ, ವಿಜಯ ದಂತ ಚಿಕಿತ್ಸಾಲಯ, ವಿ.ಟಿ.ಹೆಲ್ತ್ ಕೇರ್, ಶ್ಯಾಮು ಹೆಲ್ತ್ ಕೇರ್, ಶ್ರೀಭುವನೇಶ್ವರಿ ಕನ್ನಡ ಸಂಘದ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಅಪಘಾತವಾದ ವ್ಯಕ್ತಿಗೆ ನೀರು ಕುಡಿಸುವುದು ಅಪಾಯಕರ. ಯಾವುದೇ ಕಾರಣಕ್ಕೂ ನೀರು ಕುಡಿಸಬಾರದು. ರೋಗಿಗಳು ತಮ್ಮ ಗುಪ್ತ ರೋಗಗಳ ಬಗ್ಗೆ, ತಿಳುವಳಿಕೆ ಇಲ್ಲದ ವ್ಯಕ್ತಿಗಳಿಂದ ಚಿಕಿತ್ಸೆ ಪಡೆದು ಅಪಾಯ ತಂದುಕೊಳ್ಳಬಾರದು. ಆರೋಗ್ಯವೇ ಭಾಗ್ಯವಾಗಿದೆ. ಆದರೆ ಅದೆಷ್ಟೋ ಜನರಲ್ಲಿ ಆರೋಗ್ಯದ ಬಗ್ಗೆ ನಾನಾ ತಪ್ಪು ಕಲ್ಪನೆಗಳಿವೆ ಎಂದರು.
ವ್ಯವಸ್ಥಿತ ಆಹಾರ ಪದ್ದತಿ ರೂಢಿಸಿಕೊಳ್ಳದಿರುವುದು ರೋಗಗಳಿಗೆ ಪ್ರಮುಖ ಕಾರಣವಾಗಿದೆ. ಮಾಂಸ, ಮೊಟ್ಟೆ ತಿನ್ನಬಾರದೆಂಬ ಸಲಹೆಗಳಲ್ಲಿ ಅರ್ಥವಿಲ್ಲ. ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಸೇಬಿಗಿಂತ ಸೀಬೆ ಹಣ್ಣಿನಲ್ಲಿ ವಿಟಮಿನ್ಗಳು ಜಾಸ್ತಿ ಇವೆ. ಆದರೆ, ಆಹಾರ ಪದಾರ್ಥಗಳನ್ನು ತಿನ್ನುವ ವಿಚಾರದಲ್ಲಿ ತಪ್ಪು ಸಂದೇಶಗಳು ರವಾನೆಯಾಗುತ್ತಿರುವುದು ವಿಷಾದಕರ. ಆರೋಗ್ಯದ ಬಗ್ಗೆ ಹಾಗೂ ನಮ್ಮ ದೇಹದ ರಚನೆಯ ಬಗ್ಗೆ ಕನಿಷ್ಟ ತಿಳುವಳಿಕೆ ಇದ್ದರೆ, ಅಚಾತುರ್ಯಗಳನ್ನು ತಪ್ಪಿಸಬಹದು. ಯಾವುದೇ ಮುಜುಗರವಿಲ್ಲದೆ ವೈದ್ಯರೊಂದಿಗೆ ಹೇಳಿಕೊಂಡು ಖಾಯಿಲೆಗಳನ್ನು ಗುಣಪಡಿಸಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ಶ್ರೀರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್, ಶ್ರೀಭುವನೇಶ್ವರಿ ಕನ್ನಡ ಸಂಘದ ಮಾಜಿ ಗೌರವ ಅಧ್ಯಕ್ಷ ಜಿ.ಪುಟ್ಟಪ್ಪ, ನಿವೃತ್ತ ಪ್ರಾಂಶುಪಾಲರಾದ ಎಸ್.ರಾಜಲಕ್ಷ್ಮೀ, ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬಿ.ಜಿ.ಅಮರನಾಥ್, ವೈದ್ಯರಾದ ಡಾ.ಇಂದಿರಾ ಶ್ಯಾಮ ಪ್ರಸಾದ್, ಡಾ.ಎಲ್.ಎ.ಅಂಬಿಕಾ, ಡಾ.ಟಿ.ವೇಣುಗೋಪಾಲ್, ಶ್ರೀರಾಮ ಆಸ್ಪತ್ರೆಯ ವ್ಯವಸ್ಥಾಪಕ ಜಿ.ಸಿ.ಗುರುನಂಜುಂಡಯ್ಯ, ನಿವೃತ್ತ ಶಿಕ್ಷಕ ಬಿ.ಎಸ್.ಶ್ರೀಕಂಠಮೂರ್ತಿ ಹಿರಿಯರಾದ ಪ್ರಭುದೇವ್, ಧ್ರುವಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.