ADVERTISEMENT

ಅರಣ್ಯ ಆಧಾರಿತ ಕೃಷಿಯಿಂದ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:06 IST
Last Updated 1 ನವೆಂಬರ್ 2019, 10:06 IST
ಸಾವಯವ ಕೃಷಿಕ ಶಿವನಾಪುರ ರಮೇಶ್‌ ಅರಣ್ಯ ಆಧಾರಿತ ಕೃಷಿ ಕುರಿತು ಮಾಹಿತಿ ನೀಡಿದರು
ಸಾವಯವ ಕೃಷಿಕ ಶಿವನಾಪುರ ರಮೇಶ್‌ ಅರಣ್ಯ ಆಧಾರಿತ ಕೃಷಿ ಕುರಿತು ಮಾಹಿತಿ ನೀಡಿದರು   

ದೊಡ್ಡಬಳ್ಳಾಪುರ: ರೈತರು ತೋಟಗಾರಿಕೆ ಹಾಗೂ ಅರಣ್ಯ ಆಧಾರಿತ ಕೃಷಿಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲವಾದರೆ ಕೃಷಿಯಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯ ಇಲ್ಲ ಎಂದು ಸಾವಯವ ಕೃಷಿಕ ಶಿವನಾಪುರ ರಮೇಶ್‌ ಹೇಳಿದರು.

ಅವರು ತಾಲ್ಲೂಕಿನ ನಾಗಸಂದ್ರ ಗ್ರಾಮದ ಮುದ್ದಪ್ಪ ಅವರ ತೋಟಕ್ಕೆ ಭೇಟಿ ನೀಡಿದ ನಂತರ ಅರಣ್ಯ ಆಧಾರಿತ ಕೃಷಿ ಕುರಿತು ಮಾಹಿತಿ ನೀಡಿ, ‘ಕೃಷಿಯಲ್ಲಿ ಕಾರ್ಮಿಕರ ಕೊರತೆ ಹೆಚ್ಚಾಗುತ್ತಿದೆ. ರೈತರು ತರಕಾರಿ, ರಾಗಿ, ಜೋಳವನ್ನು ಏಕ ಬೆಳೆಯಾಗಿ ಬೆಳೆಯುವುದು ಸರಿಯಲ್ಲ. ರಾಗಿ, ಜೋಳವನ್ನು ಬೆಳೆದು ಬದುಕು ರೂಪಿಸಿಕೊಳ್ಳುತ್ತೇವೆ ಎನ್ನುವ ಭ್ರಮೆಯನ್ನು ಬಿಡಬೇಕು. ತಮ್ಮ ಮನೆಗಳಿಗೆ ಅಗತ್ಯ ಇರುವಷ್ಟನ್ನು ಮಾತ್ರ ಸಾವಯವ ವಿಧಾನದಲ್ಲಿ ಬೆಳೆದುಕೊಳ್ಳಬೇಕು. ಕೊಳವೆ ಬಾವಿ ಇದ್ದರೆ ಮಾತ್ರ ತೋಟಗಾರಿಕೆ ಬೆಳೆ ಬೆಳೆಯಲು ಸಾಧ್ಯ ಎನ್ನುವ ತಪ್ಪು ಕಲ್ಪನೆ ಇದೆ. ಮಳೆ ಆಶ್ರಯದಲ್ಲೂ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಯುವ ನಾನಾ ರೀತಿಯ ವಿಧಾನಗಳು ಇವೆ. ಆದರೆ ರೈತರು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇವತ್ತು ಇತರೆ ಉದ್ಯೋಗಗಳ ಜೊತೆಗೆ ಕೃಷಿಯನ್ನು ಮಾಡಲು ಹೋಗಿ ಕಾರ್ಮಿಕರ ಮೇಲೆ ಅತಿಯಾಗಿ ಅವಲಂಬಿಸುವಂತಾಗಿದೆ. ಇದು ಕೃಷಿಯಲ್ಲಿ ನಷ್ಟಕ್ಕೆ ಮುಖ್ಯ ಕಾರಣವಾಗಿದೆ’ ಎಂದರು.

ತೋಟದ ಸುತ್ತಲು ಮರಗಳನ್ನು ಬೆಳೆಸಿದರೆ ಬೆಳೆಗೆ ತೊಂದರೆ ಎನ್ನುವ ತಪ್ಪು ಮನೋಭಾವನೆ ಇದೆ. ಆದರೆ ಇದು ಹೊಲದಲ್ಲಿ ಬೆಳೆಯುವ ಬೆಳೆಗಳಿಗೆ ಸಹಕಾರಿಯಾಗಲಿದೆ. ನೀಲಗಿರಿ ಮರಗಳನ್ನು ಬೆಳೆಸಿ ಮಣ್ಣು, ಭೂಮಿ, ಅಂತರ್ಜಲ ಎಲ್ಲವನ್ನು ಹಾಳು ಮಾಡುವ ಬದಲು ಅರಣ್ಯ ಆಧಾರಿತ ಕೃಷಿಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ರೈತರ ಭೂಮಿ, ಅಂತರ್ಜಲ ವೃದ್ಧಿ, ಪಕ್ಷಿ ಸಂಕುಲಗಳ ಉಳಿವಿಗು ಸಹಕಾರಿಯಾಗಲಿದೆ. ಹೆಬ್ಬೇವು, ಮಹಾಗನಿ ಸೇರಿದಂತೆ ಹಲವಾರು ರೀತಿಯ ಸಸಿಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿಯು ಲಾಭವಾಗಲಿದೆ ಎಂದರು.

ADVERTISEMENT

ಈ ಸಂದರ್ಭದಲ್ಲಿ ರೈತ ಎನ್‌.ಮುದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.