ವಿಜಯಪುರ: ‘ನರೇಗಾ ಯೋಜನೆಯಡಿ ಸಿಗುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮಾಂತರ ಪ್ರದೇಶಗಳನ್ನು ಅರಣ್ಯೀಕರಣ ಮಾಡಲು ಮುಂದಾಗುವುದು ಉತ್ತಮ ಬೆಳವಣಿಗೆ’ ಎಂದು ಮುಖಂಡ ಶಾಂತಕುಮಾರ್ ತಿಳಿಸಿದರು.
ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮದ ಸ್ಮಶಾನದಲ್ಲಿ ನರೇಗಾ ಯೋಜನೆಯಡಿ ಸ್ವಚ್ಛತಾ ಕಾರ್ಯ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಳ್ಳಿಗಳು ಸರ್ವತೋಮುಖ ಅಭಿವೃದ್ಧಿಯಾದಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆಗಳ ನಿರ್ಮಾಣ, ಚರಂಡಿಗಳ ನಿರ್ಮಾಣ, ಕುಂಟೆಗಳ ನಿರ್ಮಾಣವೂ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಳ್ಳಲಿಕ್ಕೆ ನರೇಗಾ ಯೋಜನೆ ಸಹಕಾರಿಯಾಗಿದ್ದು ಜನರು ಈ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಬೇಕು’ ಎಂದರು.
‘ಈಗಿನಿಂದಲೇ ಅಂತರ್ಜಲವೃದ್ಧಿ ಮಾಡದೇ ಇದ್ದರೆ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ನಾವೇ ವಿಷ ನೀಡಿದಂತಾಗುತ್ತದೆ. ಆದ್ದರಿಂದ ಅಂತರ್ಜಲ ವೃದ್ಧಿ ಮಾಡಿ ಮಕ್ಕಳ ಭವಿಷ್ಯ ಕಾಪಾಡಬೇಕು’ ಎಂದರು.
ಗ್ರಾಮದ ಮುಖಂಡರಾದ ಬೈರಪ್ಪ, ರಾಜಣ್ಣ ಮಾತನಾಡಿ ಮುಖಂಡರಾದ ಮೋಟಪ್ಪ, ಎ.ಕೇಶವಮೂರ್ತಿ, ಎ.ಮುನಿಯಪ್ಪ, ಲೋಕೇಶ್, ದೇವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.