ಕನಕಪುರ: ಇಲ್ಲಿನ ಬೆಂಗಳೂರು ರಸ್ತೆ ರೈಸ್ಮಿಲ್ಬಳಿ ₹7.5 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉಷಾ ರವಿ ಚಾಲನೆ ನೀಡಿದರು.
ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿ ಮಾತನಾಡಿ, ‘ರೈಸ್ಮಿಲ್ ಸೇರಿದಂತೆ ಸುತ್ತಲಿನ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆಯಿದ್ದು, ಈ ಭಾಗದ ಜನರು ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಘಟಕ ತೆರೆಯುವಂತೆ ಮನವಿ ಮಾಡಿದ್ದರು’ ಎಂದು ತಿಳಿಸಿದರು.
‘ಅದಕ್ಕೆ ಸ್ಪಂದಿಸಿದ ಸಂಸದರು ಮತ್ತು ಶಾಸಕರು ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅನುದಾನದಡಿ ₹ 7.5 ಲಕ್ಷ ಹಣದಲ್ಲಿ ಘಟಕ ನಿರ್ಮಾಣ ಮಾಡುವಂತೆ ಸೂಚನೆ ನೀಡಿ, ಘಟಕ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದರು. ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಟೆಂಡರ್ ಪಡೆದಿದ್ದು ಬುಧವಾರದಿಂದ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದಾರೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಎ.ಇ ಚಂದ್ರಶೇಖರ್.ಎಂ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಾನಾ, ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್, ಮುಖಂಡರಾದ ನಟೇಶ್ ಆನಮಾನಹಳ್ಳಿ, ಮರಿಯಣ್ಣ ಕಲ್ಲಹಳ್ಳಿ, ಕುರಿಗೌಡನದೊಡ್ಡಿ ರಾಜು, ದೊಡ್ಡಯ್ಯನಕೆರೆ ರಮೇಶ್, ಲಿಂಗಯ್ಯ, ಚಂದ್ರಶೇಖರ್, ಮಾಸ್ಟರ್ ಕೃಷ್ಣಪ್ಪ, ಮಾದೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.