ಮಾಗಡಿ: ‘ಕೋವಿಡ್–19 ಹರಡದಂತೆ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದ್ವಂದ್ವ ನೀತಿ ಅನುಸರಿಸುವುದನ್ನು ಕೈಬಿಟ್ಟು ಯುದ್ಧೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕು’ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಚಿಗಳೂರು ಗ್ರಾಮದಲ್ಲಿ ತಿಪ್ಪಸಂದ್ರ ಹೋಬಳಿಯ ಅಲ್ಪಸಂಖ್ಯಾತರಿಗೆ ಹಣ್ಣು, ತರಕಾರಿ ವಿತರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ರಾಜ್ಯದಲ್ಲಿ ಕೊರೊನಾ ಸೋಂಕು ಹರಡಲು ಆರಂಭವಾಗಿ 45 ದಿನಗಳು ಉರುಳಿವೆ. ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಜನತೆಯ ನೆರವಿಗೆ ಬಂದಿರುವುದನ್ನು ಬಿಟ್ಟರೆ ಶಕ್ತಿಹೀನರಿಗೆ ನೆರವು ನೀಡುವಲ್ಲಿ ಉಭಯ ಸರ್ಕಾರಗಳು ನಯಾಪೈಸೆ ನೀಡಿಲ್ಲ’ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ‘ಕೊರೊನಾ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ಮುಂದಾಗಿ ಬೆಳೆಗಳನ್ನು ಖರೀದಿಸಿ ಬಡವರಿಗೆ ಹಂಚುತ್ತಿರುವ ಸಂಸದ ಡಿ.ಕೆ.ಸುರೇಶ್ ಸಾಧನೆ ಅನನ್ಯವಾದುದು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ದಿವ್ಯಾಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಿ.ಎಸ್.ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಕೃಷ್ಣಮೂರ್ತಿ, ಚಂದ್ರಪ್ಪ, ತಾಳೆಗೆರೆ ನಾಗಪ್ಪ, ಜಯರಾಮಯ್ಯ, ಜ್ಯೋತಿ ಕೆಂಚೇಗೌಡ, ತಿಪ್ಪಸಂದ್ರ ಹೋಬಳಿಯ ಆರೀಫ್ ಹಬೀಬ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ಮಂಜುನಾಥ, ಮರೂರಿನ ಸಾಗರ್, ಉದಯ್ಕುಮಾರ್, ಚಿಗಳೂರು ರಾಜು, ಸೋಮಸುಂದರ್, ಗೌಡಯ್ಯ, ರಂಗನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.