ಆನೇಕಲ್: ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ತಾಲ್ಲೂಕಿನಲ್ಲಿ ಜನತೆ ಸಿದ್ಧತೆ ಮಾಡಿಕೊಂಡಿದ್ದು ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳಲು ಪಟ್ಟಣದಲ್ಲಿ ಜನರು ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.
ಸಂಕ್ರಾಂತಿ ರಾಸುಗಳ ಹಬ್ಬ. ರೈತರು ರಾಸುಗಳನ್ನು ಸಿಂಗರಿಸಲು ಅವಶ್ಯಕ ಸಾಮಗ್ರಿಗಳಾದ ಹೊಸ ಹಗ್ಗ, ಮೂಗುದಾರ, ಕತ್ತಿನ ಕಣ್ಣಿ, ಕಪ್ಪು ದೃಷ್ಠಿದಾರ, ಗೆಜ್ಜೆ, ಗಂಟೆ, ಬಲೂನ್, ಬಣ್ಣಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳುವುದರಲ್ಲಿ ನಿರತರಾಗಿದ್ದರು. ಗ್ರಾಮೀಣ ಭಾಗದ ರೈತರು ಹಬ್ಬದಲ್ಲಿ ರಾಸುಗಳನ್ನು ಸಿಂಗರಿಸಿ ತಮ್ಮ ಸಂಭ್ರಮ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ.
ಎಳ್ಳು ಬೆಲ್ಲವನ್ನು ಸಿದ್ದಪಡಿಸುವ ಸಲುವಾಗಿ ಅವಶ್ಯಕ ಸಾಮಗ್ರಿಗಳನ್ನು ಕೊಳ್ಳಲು ಜನರು ಅಂಗಡಿಗಳಿಗೆ ಮುಗಿಬಿದ್ದಿದ್ದರು. ಸಂಕ್ರಾಂತಿಯ ಸಂಭ್ರಮದಲ್ಲಿ ಕಡಲೆಕಾಯಿ, ಅವರೇಕಾಯಿ, ಗೆಣಸು ಬೇಯಿಸಿ ತಿನ್ನುವುದು ವಾಡಿಕೆಯಾಗಿದೆ. ಅವರೇ ಕಾಯಿ ₹100–120 ಮಾರಾಟವಾಗುತ್ತಿತ್ತು. ಕಡಲೆಕಾಯಿ ಕೆ.ಜಿಗೆ ₹150–180, ಗೆಣಸು ₹60–70 ಹಾಗೂ ಕಬ್ಬು ಒಂದು ಜಲ್ಲೆ ₹80ಕ್ಕೆ ಮಾರಾಟವಾಗುತ್ತಿತ್ತು. ಹೂವುಗಳ ಬೆಲೆಯೂ ಏರಿಕೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.