ADVERTISEMENT

ಕಳ್ಳ ಸಾಗಣೆ: ವಿದೇಶದಿಂದ ಬಂದ ಪ್ರಯಾಣಿಕರಿಂದ ₹6 ಕೋಟಿ ಮೌಲ್ಯದ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 20:02 IST
Last Updated 6 ಫೆಬ್ರುವರಿ 2024, 20:02 IST
–
   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಲ್ಲಿ ವೈಮಾನಿಕ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ಬೆಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ₹6.08 ಕೋಟಿ ಮೌಲ್ಯದ 9.3 ಕೆ.ಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಬಂಧಿತರ ಪೈಕಿ ಇಬ್ಬರು ತಮಿಳುನಾಡಿನವರಾಗಿದ್ದು, ನಾಲ್ವರು ಉತ್ತರ ಭಾರತದವರು.

ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಮಲೇಷ್ಯಾ, ಶಾರ್ಜಾದಿಂದ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 

ADVERTISEMENT

ಮಲೇಷ್ಯಾದಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಅಡಗಿಸಿ ಇಟ್ಟುಕೊಂಡಿದ್ದ ಪೇಸ್ಟ್‌ ರೂಪದ 2.632 ಕೆ.ಜಿ. ಚಿನ್ನವನ್ನು ಪತ್ತೆ ಹಚ್ಚಿದ್ದಾರೆ. ಅದರ ಮೌಲ್ಯ ₹1.42 ಕೋಟಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಇದೇ ಪ್ರಯಾಣಿಕರಿಂದ ₹73.70 ಲಕ್ಷ ಮೌಲ್ಯದ 3,510 ಇ- ಸಿಗರೇಟ್‌ ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕ್ವಾಲಾಲಂ ಪುರದಿಂದ ಬಂದಿಳಿದ ಇಬ್ಬರು ಪ್ರಯಾಣಿಕರ ಸಾಕ್ಸ್‌ನಲ್ಲಿ ಅಡಗಿಸಿಟ್ಟುಕೊಂಡಿದ್ದ ₹1.55 ಕೋಟಿ ಮೌಲ್ಯದ ಪೇಸ್ಟ್‌ ರೂಪದ 2 .854 ಕೆ.ಜಿ. ಚಿನ್ನ ಪತ್ತೆ ವಶಕ್ಕೆ ಪಡೆಯಲಾಗಿದೆ. 

ಮತ್ತೊಂದು ಪ್ರಕರಣದಲ್ಲಿ ಶಾರ್ಜಾದಿಂದ ಬಂದ ವಿಮಾನದ ಪ್ರಯಾಣಿಕರ ಲಗೇಜ್‌ ಸ್ಥಳದಲ್ಲಿ 3.75 ಕೆ.ಜಿ ಗಟ್ಟಿ ಚಿನ್ನ ಪತ್ತೆಯಾಗಿದೆ. ಇದು ಯಾರಿಗೆ ಸೇರಿದ್ದು ಎಂಬ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.