ದೊಡ್ಡಬಳ್ಳಾಪುರ: ‘ಕೊರೊನಾ ಲಾಕ್ಡೌನ್ ಸಮಯದಲ್ಲಿ ಕುಂಬಾರ ಸಮುದಾಯ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ವೆಂಕಟಾಚಲಯ್ಯ
ಹೇಳಿದರು.
ನಗರದ ಕುಂಬಾರ ಪೇಟೆಯಲ್ಲಿ ಕವಿ ಸರ್ವಜ್ಞ ಕುಂಬಾರರ ಸಂಘ ಹಾಗೂ ಎಂಜಿನಿಯರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಸಂಕಷ್ಟ ಎದುರಿಸುತ್ತಿರುವ ಕುಂಬಾರ ಸಮುದಾಯದ ಜನತೆಗೆ ದಿನಸಿ ಕಿಟ್ ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ಬೇರೆ ಸಮುದಾಯಗಳಿಗೆ ಹೋಲಿಸಿದರೆ ಕುಂಬಾರ ಸಮುದಾಯಕ್ಕೆ ಯಾವುದೇ ಆದಾಯದ ಮೂಲಗಳು ಇಲ್ಲ. ಕುಂಬಾರಿಕೆಯನ್ನೇ ನೆಚ್ಚಿಕೊಂಡಿರುವ ಸಮುದಾಯಕ್ಕೆ ಲಾಕ್ಡೌನ್ನಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಸಮುದಾಯದ ಹೆಚ್ಚು ಜನ ಶಿಕ್ಷಿತರಾಗಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ, ಕುಲಕಸುಬನ್ನೇ ನೆಚ್ಚಿಕೊಂಡಿರುವ ಸಮುದಾಯ ಇತರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಉನ್ನತಿ ಸಾಧಿಸಬೇಕು ಎಂದು ಹೇಳಿದರು.
ಉಮಾದೇವಿ, ದಶರಥ್, ಪ್ರಕಾಶ್, ಕವಿ ಸರ್ವಜ್ಞ ಕುಂಬಾರರ ಸಂಘದ ಅಧ್ಯಕ್ಷ ಕೆ. ಸುರೇಶ್, ಉಪಾಧ್ಯಕ್ಷ ಚಂದ್ರಶೇಖರ್, ಟ್ರಸ್ಟ್ ಉಪಾಧ್ಯಕ್ಷ ಜಯರಾಮಯ್ಯ, ಪ್ರಕಾಶ್, ಸರ್ವಮಂಗಳಾ, ಜಿ. ರಾಮಕೃಷ್ಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.