ವಿಜಯಪುರ(ಬೆಂ.ಗ್ರಾಮಾಂತರ):ಹೋಬಳಿಯ ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಡಾ.ಅಕ್ಷತಾ ಅವರು ವಿದ್ಯಾರ್ಥಿಗಳ ತಪಾಸಣೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯ ದೈಹಿಕ ಆರೋಗ್ಯ ಸುಧಾರಣೆಯಾದಾಗ ಮಾತ್ರ ಅವರ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ. ಅವರಲ್ಲಿ ಜಂತುಹುಳುಗಳು ನಿರ್ನಾಮಕ್ಕಾಗಿ ಮಾತ್ರೆಗಳನ್ನೂ ನೀಡಲಾಗುತ್ತಿದೆ. ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಆರೋಗ್ಯ ಶಿಬಿರ ಸಹಕಾರಿಯಾಗಲಿದೆ. ಪೋಷಕರು ಮಕ್ಕಳ ಆರೋಗ್ಯ ಕುರಿತು ಕಾಳಜಿವಹಿಸಬೇಕು ಎಂದರು.
ಮುಖ್ಯಶಿಕ್ಷಕ ಚಂದ್ರಶೇಖರ ಹಡಪದ್ ಮಾತನಾಡಿ, ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ವಯಸ್ಸಿಗೆ ಅನುಗುಣವಾಗಿ ತೂಕ ಮತ್ತು ಎತ್ತರ, ಆರೋಗ್ಯದ ಬಗ್ಗೆ ನಿರಂತರವಾಗಿ ಕಾಳಜಿ ವಹಿಸಲಾಗುತ್ತಿದೆ. ನಿಯಮಿತವಾಗಿ ಅವರನ್ನು ತಪಾಸಣೆಗೆ ಒಳಪಡಿಸುತ್ತಿರುವ ಕಾರಣ, ಯಾವ ಯಾವ ವಿದ್ಯಾರ್ಥಿಯಲ್ಲಿ ಏನೇನು ನ್ಯೂನತೆಗಳಿವೆ ಎನ್ನುವುದನ್ನು ಕಂಡುಹಿಡಿಯಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ಶಾಲೆಯಲ್ಲಿ ಬಿಸಿಯೂಟದ ಜೊತೆಗೆ ಹಾಲು, ಮೊಟ್ಟೆ, ಚಿಕ್ಕಿ ವಿತರಣೆ ಹೆಚ್ಚು ಸಹಕಾರಿಯಾಗಿದೆ. ಅವರ ಕಲಿಕೆಗೂ ಪೂರಕವಾಗಿದೆ ಎಂದರು.
ಸಹ ಶಿಕ್ಷಕ ಪರಮೇಶಯ್ಯ, ರಜನಿ, ಹನುಮಂತರಾಜು, ಶುಶ್ರೂಷಕಿ ವೀಣಾ, ಶಶಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.