ಸಾವು
ಪ್ರಾತಿನಿಧಿಕ ಚಿತ್ರ
ಹೊಸಕೋಟೆ: ಸಾಲಬಾಧೆ ಮತ್ತು ಕೌಟುಂಬಿಕ ಕಲಹದಿಂದ ಬೇಸತ್ತು ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ. ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದು, ತಾಯಿ ಮಾತ್ರ ಬದುಕುಳಿದಿದ್ದಾಳೆ.
ತಾಲ್ಲೂಕಿನ ಗೊಣಕನಹಳ್ಳಿಯ ಶಿವು (32) ಹಾಗೂ ಮಂಜುಳಾ ಮಕ್ಕಳೊಂದಿಗೆ ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದರು. ದಂಪತಿ ಶನಿವಾರ ರಾತ್ರಿ ಮನೆಯಲ್ಲಿ ತಮ್ಮ ಮಕ್ಕಳಾದ ಚಂದ್ರಕಲಾ(11) ಮತ್ತು ಉದಯ್ ಸೂರ್ಯ(7) ಅವರ ಕುತ್ತಿಗೆಗೆ ದುಪಟ್ಟಾದಿಂದ (ವೇಲ್) ಬಿಗಿದು, ನಂತರ ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ.
ಮಕ್ಕಳನ್ನು ಕೊಂದ ನಂತರ ನಂತರ ಶಿವು ದುಪಟ್ಟಾದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮಂಜುಳಾ ಮಾತ್ರ ಬದುಕಿ ಉಳಿದಿದ್ದಾರೆ. ಅವರನ್ನು ಹೊಸಕೋಟೆ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಸಗಿ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಗೊಣಕನಹಳ್ಳಿಯ ಶಿವು ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾದ ಕಾರಣ ಪೋಷಕರು ಮದುವೆಗೆ ವಿರೋಧಿಸಿದ್ದರು.
ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದ ಶಿವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿಪರೀತ ಸಾಲ ಮಾಡಿಕೊಂಡಿದ್ದ. ಕುಡಿತದ ಚಟಕ್ಕೆ ಬಲಿಯಾಗಿದ್ದ. ಇದರಿಂದ ದಂಪತಿ ಆಗಾಗ ಜಗಳವಾಡುತ್ತಿದ್ದರು.
ಸಾಯುವ ಮುನ್ನ ತನ್ನ ತಂದೆ, ತಾಯಿಗೆ ಕರೆ ಮಾಡಿ ಬರುವುದಾಗಿ ಮಂಜುಳಾ ಹೊರಗೆ ಹೋಗಿದ್ದರು. ಅಷ್ಟರಲ್ಲಿ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮಂಜುಳಾ ಅವರನ್ನು ಬಂಧಿಸಿದರು ಎಂದು ಡಿವೈಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ.
ಮಂಜುಳಾ ಆತ್ಮಹತ್ಯೆಗೆ ಯತ್ನಿಸಿದ್ದರು. ಬಟ್ಟೆ ತುಂಡಾಗಿ ಹರಿದು ಬಿದ್ದ ಕಾರಣ ಬದುಕಿ ಉಳಿದಿದ್ದರು ಎಂದೂ ಹೇಳಲಾಗುತ್ತಿದೆ. ಇನ್ನೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಪೊಲೀಸರು ಮಹಿಳೆಯನ್ನು ಪ್ರಶ್ನಿಸುತ್ತಿದ್ದಾರೆ.
‘ಪತಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಅವರಿವರ ಮನೆ ಕೆಲಸ ಮಾಡಿ ನಾನೇ ಸಂಸಾರ ದೂಗಿಸುತ್ತಿದ್ದೆ. ಆದರೆ, ಈಚೆಗೆ ಶೀಲದ ಬಗ್ಗೆ ಪತಿ ಅನುಮಾನಪಡಲು ಶುರು ಮಾಡಿದ್ದ. ಸಾಲ ಹೆಚ್ಚಾಗಿ ಹಣವಿಲ್ಲದ ಕಾರಣ ಎರಡು ಮೂರು ತಿಂಗಳುಗಳ ಹಿಂದೆಯೇ ಸಾಯಲು ನಿರ್ಧಾರ ಮಾಡಿದ್ದ. ಆದರೆ, ತಾನು ಸತ್ತರೆ ಮಕ್ಕಳು ತಬ್ಬಲಿ ಆಗುತ್ತಾರೆ ಎಂದು ಸಾಮೂಹಿಕವಾಗಿ ಸಾಯುವ ನಿರ್ಧಾರ ಮಾಡಿದ್ದೆವು’ ಎಂದು ಮಂಜುಳಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.