ADVERTISEMENT

ಹೊಸಕೋಟೆ: ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ಜಾಗ ತೆರವು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:14 IST
Last Updated 28 ಫೆಬ್ರುವರಿ 2026, 2:14 IST
ಹೊಸಕೋಟೆ ಕುವೆಂಪುನಗರದ 4 ನೇ ಮುಖ್ಯ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಅನುವಾಗದಂತೆ ರಸ್ತೆಯಲ್ಲಿ ಮಣ್ಣು ಸುರಿದಿದ್ದನ್ನು ತೆರವುಗೊಳಿಸಲಾಯಿತು
ಹೊಸಕೋಟೆ ಕುವೆಂಪುನಗರದ 4 ನೇ ಮುಖ್ಯ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಅನುವಾಗದಂತೆ ರಸ್ತೆಯಲ್ಲಿ ಮಣ್ಣು ಸುರಿದಿದ್ದನ್ನು ತೆರವುಗೊಳಿಸಲಾಯಿತು   

ಹೊಸಕೋಟೆ: ಸಾರ್ವಜನಿಕರು ಓಡಾಡುವ ರಸ್ತೆಯನ್ನು ತಮ್ಮದೆಂದು ಎಂಟು ತಿಂಗಳ ಹಿಂದೆ ಮಣ್ಣು ಹಾಕಿ ಮುಚ್ಚಿದ್ದ ಜಾಗವನ್ನು ತೆರವುಗೊಳಿಸಿ, ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಯಿತು.

ಕುವೆಂಪುನಗರ 29 ವಾರ್ಡ್‌ನ 4 ಮುಖ್ಯ ರಸ್ತೆಯಲ್ಲಿ ಕಳೆದ 35 ವರ್ಷದಿಂದ ಸಾರ್ವಜನಿಕರು ಓಡಾಡುತ್ತಿದ್ದಾರೆ. ಎಂಟು ತಿಂಗಳ ಹಿಂದೆ ಕುಟುಂಬವೊಂದು ಈ ಜಾಗ ತಮಗೆ ಸೇರಿದೆ ಎಂದು ರಸ್ತೆಯನ್ನು ಮುಚ್ಚಿದ್ದರು. ಈ ಸಂಬಂಧ ಸಾರ್ವಜನಿಕರು ನೀಡಿದ ದೂರಿನ ಅನ್ವಯ ನಗರಸಭೆ ಸಿಬ್ಬಂದಿ ಪೋಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ಮಣ್ಣು ತೆಗೆಸಿ ಸಾರ್ವಜನಿಕ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.

1990ಲ್ಲಿ ನಾರಾಯಣಸ್ವಾಮಿ ಎಂಬ ವ್ಯಕ್ತಿ ಇಲ್ಲಿನ ತನ್ನ ಜಮೀನನ್ನು ರೆವಿನ್ಯೂ ಜಾಗವಾಗಿ ಪರಿವರ್ತಿಸಿ ಅಡಿ ಲೆಕ್ಕದಲ್ಲಿ ನಿವೇಶನಗಳನ್ನು ಮಾರಾಟ ಮಾಡಿದ್ದರು. ಅದರಂತೆ ಈ ಭಾಗದ ಜನರು ನಿವೇಶನ ಖರೀದಿ ಮಾಡಿ ಸ್ವಂತ ಮನೆ ನಿರ್ಮಾಣ ಮಾಡಿಕೊಂಡಿದ್ದರು. ಒಟ್ಟಾರೆ ಈ ಬಡಾವಣೆಯಲ್ಲಿ ಬಡಿಗೆದಾರರು ಸೇರಿದಂತೆ 400 ಕ್ಕೂ ಹೆಚ್ಚು ಕುಟುಂಬಗಳು ವಾಸಕ್ಕಿದ್ದರು. ಇತ್ತೀಚೆಗೆ ನಾರಾಯಣಸ್ವಾಮಿ ಮಕ್ಕಳು ಮೂಲ ಆರ್ ಟಿಸಿ ಮೂಲಕ ಡಿಗ್ರಿ ಮಾಡಿಸಿಕೊಂಡು ಇದು ನಮಗೆ ಸೇರಿದದ್ದು ಎಂದು ತಕರಾರು ತೆಗೆದಿದ್ದರು. ಜೊತೆಗೆ ಕೋರ್ಟ್ ಮೂಲಕ ತಕರಾರು ಮಾಡಿ ಕಳೆದ 8 ತಿಂಗಳಿಂದ ನಾರಾಯಣಸ್ವಾಮಿ ಮತ್ತು ಕುಟುಂಬಸ್ಥರು ಈ ರಸ್ತೆಯನ್ನು ಮುಚ್ಚಿಸಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ಈ ಜಾಗದ ಸಂಬಂದ ನಾರಾಯಣಸ್ವಾಮಿ ಮತ್ತು ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು ಜೊತೆಗೆ ರಸ್ತೆಯನ್ನು ಮುಚ್ಚಿ ಹಾಕದ್ದರು. ಇದರಿಂದ ನಗರಸಭೆಯ ಆಯುಕ್ತ ನೀಲಲೋಚನ ಪ್ರಭು ಮೂಲ ದಾಖಲೆ ಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಗರದ ಡಿವೈಎಸ್ಪಿ ಮಲ್ಲೇಶ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್‌ ಗೋವಿಂದ್‌ ನೇತೃತ್ವದಲ್ಲಿ ನಾರಾಯಣಸ್ವಾಮಿ ಕುಟುಂಬಸ್ಥರನ್ನು ಮನವೊಲಿಸಿ ರಸ್ತೆ ಒತ್ತುವರಿಯನ್ನು ತೆರವು ಮಾಡಿದರು.

1988ರಲ್ಲಿ ನಿವೇಶನ ನಿರ್ಮಾಣ ವೇಳೆ 45 ಮೀ. ರಸ್ತೆ ಮಾಡುವ ಕುರಿತು, ನಗರದ ಯೋಜನಾ ನಕಾಶೆ, ಪ್ರಾಧಿಕಾರದ ನಕಾಶೆ ಮತ್ತು ಮಾರಾಟ ನಕಾಶೆಯಲ್ಲೂ ಮುಚ್ಚಲಾದ ರಸ್ತೆಯನ್ನು ಉಲ್ಲೇಖಿಸಲಾಗಿದೆ. ಈ ಜಾಗ ರಸ್ತೆಗೆ ಮೀಸಲಿಟ್ಟಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಮೂಲ ವಾರಸುದಾರರ ಮಕ್ಕಳು ರಸ್ತೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕ ಓಡಾಟಕ್ಕೆ ಅಡ್ಡಿಪಡಿಸಿದ್ದರು ಎಂದು ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.

ಆತಿಕ್ರಮಣ ತೆರವು

ಕುವೆಂಪು ನಗರದ 4ನೇ ಮುಖ್ಯರಸ್ತೆಯಲ್ಲಿನ ಬಡವಾಣೆಗೆ ರಸ್ತೆ ಇಲ್ಲ ಎಂದು ಅಲ್ಲಿನ ಜನರು ನಗರಸಭೆ ಆಯುಕ್ತರಿಗೆ ದೂರು ಸಲ್ಲಿಸಿದ್ದರಿಂದ ಕಳೆದ ಒಂದು ವರ್ಷದಿಂದ ಕಾನೂನು ರೀತಿ ಎಲ್ಲ ತೊಡಕುಗಳನ್ನು ಸರಿಪಡಿಸಿ ಪೊಲೀಸ್ ಇಲಾಖೆಯ ಸಹಯದೊಂದಿಗೆ ಖಾಸಗಿ ವ್ಯಕ್ತಿಗಳಿಂದ ಆತಿಕ್ರಮಿಸಲ್ಪಟ್ಟ ರಸ್ತೆಯನ್ನು ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಶರತ್ ಬಚ್ಚೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.