
ಹೊಸಕೋಟೆ: ನಗರದಲ್ಲಿ ಗುರುವಾರ ಸಾರ್ವತ್ರಿಕ ಮುಷ್ಕರ ದಿನದಂದು ಕಾರ್ಖಾನೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಬಸ್ ತಡೆದ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರ ಭಾಗವಾಗಿ ಹೊಸಕೋಟೆಯಲ್ಲಿ ಬಂದ್ ನಡೆಸಲು ನಸುಕಿನ ಜಾವದಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಹೊಸಕೋಟೆ ಪಿಲಗುಂಪೆ ಹಾಗೂ ಕೋಲಾರ ಜಿಲ್ಲೆಯ ನರಸಾಪುರ, ವೆಮಗಲ್, ಮಾಲೂರು ಕೈಗಾರಿಕಾ ಪ್ರದೇಶಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬೆಳಗಿನ ಜಾವ 4 ವೇಳೆ ಆಯಾಯ ಕಂಪನಿಗಳ ವಾಹನಗಳಲ್ಲಿ ತೆರಳಿದ್ದರು. ಈ ವಾಹನಗಳನ್ನು ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಹೋರಾಟಗಾರರು, ‘ನಿಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ’, ‘ನೀವು ಬೆಂಬಲ ನೀಡಲೇಬೇಕು’, ‘ಒಂದು ದಿನದ ಸಂಬಳ ಹೋದರೂ ಪರವಾಗಿಲ್ಲ. ಹೋರಾಟದಲ್ಲಿ ಪಾಲ್ಗೊಳ್ಳಿ’ ಎಂದು ಮನವಿ ಮಾಡಿದರು. ಇದರಿಂದ ಕಾರ್ಮಿಕರು– ಹೋರಾಟಗಾರರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಈ ವೇಳೆ ಬಂದ ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಪಡಿಸದೆ, ಕಾರ್ಮಿಕರ ವಾಹನವನ್ನು ರಸ್ತೆ ಮಧ್ಯ ನಿಲ್ಲಿಸಲು ಸೂಚಿಸಿದರು. ಇದರಿಂದ ವಾಹನ ದಟ್ಟಣೆ ಉಂಟಾಯಿತು. ಮಧ್ಯ ಪ್ರವೇಶಿಸಿದ ಹೋರಾಟಗಾರರು, ‘ನಾವು ಕೇವಲ ಮನವಿ ಮಾಡುತ್ತಿದ್ದೇವೆ ಅಷ್ಟೇ’ ಎಂದಿದ್ದಾರೆ. ಇದರಿಂದ ಕೆರಳಿದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರದಲ್ಲಿ ನಾಲ್ವರು ಹೋರಾಟಗಾರರಿಗೆ ಗಾಯವಾಗಿದೆ.
‘ನಾವು ಹೊರ ಜಿಲ್ಲೆಯಿಂದ ಬಂದಿದ್ದೇವೆ. ಹೋರಾಟದಲ್ಲಿ ಪಾಲ್ಗೊಳ್ಳದಂತೆ ಕಂಪನಿಗಳು ನೋಟಿಸ್ ನೀಡಿವೆ. ಹೀಗಾಗಿ ಅನಿವಾರ್ಯವಾಗಿ ಕೆಲಸಕ್ಕೆ ತೆರಳುತ್ತಿದ್ದೇವೆ’ ಎಂದು ಬಸ್ನಲ್ಲಿದ್ದ ಕಾರ್ಮಿಕರು ತಿಳಿಸಿದರು.
‘ನಮ್ಮ ಅನ್ನದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಿಮ್ಮಲ್ಲಿ ಯಾರು ಕಾರ್ಮಿಕರು, ರೈತರ ಮಕ್ಕಳು ಇಲ್ಲವೇ?, ಹೋರಾಟ ಹತ್ತಿಕ್ಕಲು ಲಾಠಿಯಿಂದ ಬೆದರಿಸಲು ಪ್ರಯತ್ನಿಸುತ್ತಿದ್ದಾರಾ?’ ಎಂದು ಹೋರಾಟಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.