ಹೊಸಕೋಟೆ: ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಚೆನ್ನೈ ಹೆದ್ದಾರಿಯ ಸೇತುವೆ ಕೆಳಗಿರುವ ಕೆಇಬಿ ವೃತ್ತದಲ್ಲಿ ಸಂಚಾರಿ ನಿಯಮಗಳು ಪಾಲನೆಯಾಗದೆ ಅಪಘಾತಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಈ ವೃತ್ತದ ಮೂಲಕ ಅತಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಹೊಸೂರು, ಸರ್ಜಾಪುರ, ಸೂಲಿಬೆಲೆ, ದೇವನಹಳ್ಳಿಗಳಿಗೆ ಈ ವೃತ್ತದ ಮೂಲಕವೇ ತೆರಳಬೇಕು. ಹೊಸಕೋಟೆ ಮೂಲಕ ಈ ಭಾಗಗಳಿಗೆ ತೆರಳಬೇಕಾದರೆ ಕೆಇಬಿ ವೃತ್ತದ ಮೂಲಕವೇ ಸಂಚರಿಸಬೇಕಿದೆ.
ದೊಡ್ಡದೊಡ್ಡ ಲಾರಿಗಳು, ಕಂಟೈನರ್ಗಳು ಈ ಮಾರ್ಗದಲ್ಲಿ ಸಂಚರಿಸುವಾಗ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ.
ಕೆಇಬಿ ವೃತ್ತದ ರಸ್ತೆಗಳು ಅವೈಜ್ಞಾನಿಕವಾಗಿ ಕೂಡಿದ್ದು, ವಾಹನಗಳು ಸಂಚಾರ ಪಾಲಿಸದೆ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ದೊಡ್ಡ ಅಪಘಾತ ಸಂಭವಿಸುವ ಮುನ್ನವೇ ಸ್ಥಳೀಯ ಆಡಳಿತ ಮತ್ತು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ಬಹುತೇಕ ರಸ್ತೆಗಳು ಅತ್ಯಂತ ಕಿರಿದಾದ ರಸ್ತೆಗಳಾಗಿವೆ. ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ರಸ್ತೆಗಳು ಕಿರಿದಾಗಿದ್ದು, ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿವೆ. ರಸ್ತೆಗಳಲ್ಲಿ ವಾಹನ ನಿಲ್ಲಿಸದಂತೆ ಯೋಜನೆ ರೂಪಿಸಿ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.