ದೊಡ್ಡಬಳ್ಳಾಪುರ: ತಾಲ್ಲೂಕು ಕಚೇರಿ ಮುಂದೆ ಬುಧವಾರ ಜನಸಾಮಾನ್ಯರ ವಸತಿ,ಭೂಮಿ ವಂಚಿತರ ಒಕ್ಕೂಟ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬುಜಗಜೀವನ್ರಾಂ ಒಕ್ಕೂಟ, ಜನಪರ ಹೋರಾಟಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
ನಿವೇಶನ ರಹಿತ ಕಡುಬಡವ ಫನಾನುಭವಿಗಳನ್ನು ಗುರುತಿಸಿ ನಿವೇಶನ ಮಂಜೂರು ಮಾಡಬೇಕು. ಮನೆ ಇಲ್ಲದವರಿಗೆ ಮನೆ ಮಂಜೂರು ಹಾಗೂ ಬಡ ರೈತರಿಗೆ ಸಾಗುವಳಿ ಚೀಟಿಗಳನ್ನು ತಾಲ್ಲೂಕು ಆಡಳಿತ ಶೀಘ್ರವೇ ನೀಡಬೇಕು ಎಂದು ಜನಪರ ಒಕ್ಕೂಟಗಳ ಅಧ್ಯಕ್ಷ ಜಿ.ನಂಜುಂಡಪ್ಪ ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಅತಿ ಹೆಚ್ಚು ದಲಿತರು, ಹಿಂದುಳಿದ ವರ್ಗದವರು ವಾಸಿಸುತ್ತಿದ್ದಾರೆ. ಹಲವು ಭಾಗದಲ್ಲಿ ವಸತಿ ಇಲ್ಲದೆ ಒಂದೇ ಗುಡಿಸಲಿನಲ್ಲಿ 5 ರಿಂದ 10 ಮಂದಿ ಕುಟುಂಬಸ್ಥರು ವಾಸ ಮಾಡುತ್ತಿದ್ದಾರೆ. ನಿರಾಶ್ರಿತರಿಗೆ ನಿವೇಶನ ಮಂಜೂರು ಮಾಡುತ್ತಿಲ್ಲ. ರೈತರಿಗೆ ಸಾಗುವಳಿ ಚೀಟಿಗೆ ಅರ್ಹರಿದ್ದರೂ ಹತ್ತಾರು ವರ್ಷಗಳಿಂದ ವಿತರಣೆ ಮಾಡಿಲ್ಲ, ಶೀಘ್ರವಾಗಿ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಕೆ.ಜಯರಾಂ, ಮುಖಂಡರಾದ ರಂಗಪ್ಪ, ಗಂಗಾಧಾರ್, ಮೇಘರಾಜು, ರಮೇಶ್,ಶಂಕರ್, ರಾಮ್ ಕುಮಾರ್, ಲಕ್ಷ್ಮಮ್ಮ ಇದ್ದರು.
ನಿರಾಶ್ರಿತರಿಗೆ ವಸತಿ ಕಲ್ಪಿಸಲು ಸರ್ಕಾರ ಕೂಡಲೇ ಜಮೀನು ನೀಡಬೇಕು.
ಸರ್ಕಾರ ನಿರ್ಮಿಸಿರುವ ಬಡಾವಣೆಗಳಲ್ಲಿ ನಿರಾಶ್ರಿತರನ್ನು ಕಡೆಗಣಿಸಿ ಉಳ್ಳವರಿಗೆ ನೀಡಿರುವುದನ್ನ ವಾಪಾಸ್ ಪಡೆಯಬೇಕು.
ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು.
ಸರ್ಕಾರಿ ಸ್ವತ್ತುಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಬೇಕು.
ಅತಿ ಸಣ್ಣ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.