ADVERTISEMENT

ನಾನೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ: ಚಂದ್ರಣ್ಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:11 IST
Last Updated 26 ಜನವರಿ 2023, 5:11 IST
ಜಿ. ಚಂದ್ರಣ್ಣ
ಜಿ. ಚಂದ್ರಣ್ಣ   

ದೇವನಹಳ್ಳಿ: ‘ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಮತದಾರರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ ಎಂದು ಕೇಳುತ್ತಿರುವುದು ನನಗೆ ಬೇಸರ ತಂದಿದೆ. ಈಗಾಗಲೇ, ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿರುವ ನಾನು ಕೂಡ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ’ ಎಂದು ಮಾಜಿ ಶಾಸಕ ಜಿ. ಚಂದ್ರಣ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಕ್ಷದಲ್ಲಿನ ಬಣ ರಾಜಕೀಯದ ಬಗ್ಗೆ ಕಾರ್ಯಕರ್ತರು ಗಮನ ಹರಿಸಬಾರದು. ಪಕ್ಷವೇ ಒಂದು ಬಣವಾಗಿದೆ. ಇಬ್ಬರೂ ಮಾಜಿ ಶಾಸಕರು ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ಟಿಕೆಟ್‌ ಯಾರಿಗೆಂದು ಪಕ್ಷದ ವರಿಷ್ಠರು ತಿಳಿಸಿಲ್ಲ. ನಾನು 9 ವರ್ಷಗಳಿಂದಲೂ ನಿರಂತರವಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ’ ಎಂದರು.

ADVERTISEMENT

‘ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಎಲ್ಲಿಯೂ ತಿಳಿಸಿಲ್ಲ. ಪಕ್ಷದಲ್ಲಿರುವವರೇ ವದಂತಿ ಹಬ್ಬಿಸಿ ಈ ಬಾರಿ ಮಾಜಿ ಶಾಸಕ ಚಂದ್ರಣ್ಣ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ವರಿಷ್ಠರ ಸೂಚನೆಯಂತೆ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ನಿರ್ದೇಶನದಂತೆ ದೇವನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಬೆಳೆಸಲು ನಿರತನಾಗಿದ್ದೇನೆ. ಎಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ತಿಳಿಸಿಲ್ಲ’ ಎಂದು ಹೇಳಿದರು.

ಬಿಜೆಪಿ ಖಜಾಂಚಿ ಚನ್ನಕೇಶವ ಮಾತನಾಡಿ, ‘ಪಕ್ಷ ಸಂಘಟನೆಯತ್ತ ಕಾರ್ಯಕರ್ತರು ಗಮನ ಹರಿಸಬೇಕು. ಟಿಕೆಟ್‌ ವಿಚಾರವಾಗಿ ಬಣಗಳಲ್ಲಿ ಗುರುತಿಸಿಕೊಂಡು ರಾಜಕೀಯವಾಗಿ ತಪ್ಪು ಸಂದೇಶ ರವಾನೆಯಾಗುವಂತೆ ಮಾಡಬಾರದು. ಟಿಕೆಟ್‌ ನೀಡುವವರೆಗೂ ತಾಳ್ಮೆಯ ಅಗತ್ಯವಿದೆ. ಪಕ್ಷಕ್ಕೆ ಬಂದಿರುವ ಪ್ರಮುಖ ನಾಯಕರು ಪಕ್ಷ ಕಟ್ಟುವ ಕೆಲಸ ಮಾಡಬೇಕೇ ಹೊರತು ಒಡೆಯುವ ಕೆಲಸ ಮಾಡಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.