ವಿಜಯಪುರ: ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದು ಒಂದೊಂದು ಹನಿ ನೀರಿಗೂ ಪರದಾಡುವಂತಾಗಿದೆ. ಈಗಾಗಲೇ ಮರಳನ್ನು ಅಗಾಧ ಪ್ರಮಾಣದಲ್ಲಿ ಲೂಟಿ ಮಾಡಲಾಗಿದೆ. ಮರ – ಗಿಡಗಳನ್ನು ನಾಶ ಮಾಡಿ ಪರಿಣಾಮ ಎದುರಿಸುತ್ತಿರುವ ಸಂದರ್ಭದಲ್ಲೇ ಬೆಟ್ಟ – ಗುಡ್ಡಗಳನ್ನು ಕರಗಿಸುವ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ಮುಖಂಡ ದೇವರಾಜು ಆರೋಪಿಸಿದರು.
ಮುದುಗುರ್ಕಿ ಗ್ರಾಮದ ಬಳಿಯಿರುವ ಕಲ್ಲುಬಂಡೆ ಗುಡ್ಡದಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸುತ್ತಲು ಕೃಷಿ ಚಟುವಟಿಕೆ ನಡೆಸಲು ತೊಂದರೆ ಆಗಿದೆ. ಸರ್ವೇ ನಂಬರ್ 31, 32, 20, 21 ಭೂಮಿ ಕಲ್ಲಿನ ಗುಡ್ಡಕ್ಕೆ ಹೊಂದಿಕೊಂಡಿದೆ. ಗಣಿಗಾರಿಕೆ ನಡೆಸುವ ಉದ್ದೇಶದಿಂದ ಸಿಡಿಮದ್ದು ಸಿಡಿಸಲಾಗುತ್ತಿದೆ. ಗುಡ್ಡದ ಮೇಲೆ ಕರಗದಮ್ಮ ದೇವಾಲಯ ಇದ್ದು ಬಿದ್ದುಹೋಗುವ ಸಂಭವವಿದೆ. ಜಿಲ್ಲಾಧಿಕಾರಿ, ಶಾಸಕರು ಸೇರಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಮುಖಂಡ ಕೃಷ್ಣ ಮಾತನಾಡಿ, ಗಣಿಗಾರಿಕೆ ಸಮೀಪದಲ್ಲೇ ವೃದ್ಧಾಶ್ರಮ, ಗೋವು ಕೇಂದ್ರ, ನಾಗರ್ಜುನ ಕಾಲೇಜು ಇದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ತಹಶೀಲ್ದಾರರಿಗೆ ಪತ್ರ ಬರೆದು ಕಲ್ಲುಗಣಿಗಾರಿಕೆ ಗುತ್ತಿಗೆ ರದ್ದುಪಡಿಸಲು ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.