ದೇವನಹಳ್ಳಿ: ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರಾಜ್ಯದಾದ್ಯಂತ ಅರಣ್ಯ ಇಲಾಖೆಯಿಂದ ಶಾಲಾ, ಕಾಲೇಜು, ಸಂಘ–ಸಂಸ್ಥೆಗಳು ಹಾಗೂ ಸರ್ಕಾರಿ ಜಾಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಪವಿತ್ರಾ ತಿಳಿಸಿದರು.
ಪಟ್ಟಣದ ಬೈಚಾಪುರ ರಸ್ತೆಯಲ್ಲಿರುವ ಯಾದವ ಎಜುಕೇಷನ್ ಸೊಸೈಟಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 150 ಗಿಡಗಳನ್ನು ನೆಡುವ ಗುರಿ ಹೊಂದಿದ್ದೇವೆ. 224 ವಿಧಾನಸಭಾ ಕ್ಷೇತ್ರದಲ್ಲಿ 33 ಸಾವಿರ ಸಸಿಗಳನ್ನು ನೆಡಲಾಗುವುದು. ಏಕಕಾಲಕ್ಕೆ 40 ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಸಿ ನೆಡುವುದರೊಂದಿಗೆ ಅವುಗಳ ಪೋಷಣೆಗೂ ಆದ್ಯತೆ ನೀಡಲಾಗುತ್ತದೆ. ಹಾಗಾಗಿ, ಇಲಾಖೆಯಿಂದ ಬಹುತೇಕ ಶಾಲೆ ಕಾಲೇಜು, ಸಂಘ–ಸಂಸ್ಥೆ ಹಾಗೂ ನೀರಿನ ವ್ಯವಸ್ಥೆ ಇರುವ ಕಡೆ ಸಸಿ ನೆಟ್ಟರೆ ಅವುಗಳ ಆರೈಕೆ ಸುಲಭ ಎಂದರು.
ಎಸಿಎಫ್ ಶ್ರೀಧರ್, ಡಿಆರ್ಎಫ್ಒ ಶಿವಶಂಕರಪ್ಪ, ರೆಹಮಾನ್, ಅರಣ್ಯ ರಕ್ಷಕರಾದ ಬಿರೇಶ್, ಅನಿಲ್ಕುಮಾರ್, ಸಂಗಯ್ಯ, ಚನ್ನರಾಯಪ್ಪ, ವೀರಭದ್ರಪ್ಪ, ಕರ್ನಾಟಕ ಯಾದವ ಎಜುಕೇಷನ್ ಸೊಸೈಟಿ ಅಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿ ಎಂ. ಲಕ್ಷ್ಮಿನಾರಾಯಣ್, ಉಪಾಧ್ಯಕ್ಷ ಶ್ರೀಧರ್ಮೂರ್ತಿ, ಜಂಟಿ ಕಾರ್ಯದರ್ಶಿ ಉಮಾಶಂಕರ್ ಯಾದವ್, ತಾಲ್ಲೂಕು ಯಾದವ ಸಂಘದ ಉಪಾಧ್ಯಕ್ಷ ಮುನಿರಾಜು, ಮರಿಯಪ್ಪ, ಶ್ರೀಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.