ಆನೇಕಲ್: ‘ರೈತರಿಗೆ ಮಾಯಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘವು ಎಲ್ಲಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಸಂಘದ ವ್ಯಾಪ್ತಿಯ 23 ಗ್ರಾಮಗಳಲ್ಲಿ ಸದಸ್ಯ ರೈತರಿಗೆ ಸೌಲಭ್ಯ ನೀಡಲಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಎಂ. ರಾಮಕೃಷ್ಣ ತಿಳಿಸಿದರು.
ತಾಲ್ಲೂಕಿನ ಗೆರಟಿಗನಬೆಲೆಯಲ್ಲಿ ಸಹಕಾರ ಸಂಘದಿಂದ ಪ್ರಾರಂಭಿಸಲಾದ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತರಿಗೆ ಬೆಳೆ ಸಾಲ, ಆಭರಣ ಸಾಲ, ರಸಗೊಬ್ಬರ ಮಾರಾಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ರೈತರಿಗೆ ಆಧುನಿಕ ಕೃಷಿ ಬಗ್ಗೆ ಮಾರ್ಗದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮ ರೂಪಿಸುವ ಗುರಿ ಹೊಂದಲಾಗಿದೆ ಎಂದರು.
ಗೆರಟಿಗನಬೆಲೆಯಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲಾಗಿದೆ. ಸಂಘದ ವತಿಯಿಂದ ಪ್ರಾರಂಭಿಸಿರುವ ಮೊದಲ ನ್ಯಾಯಬೆಲೆ ಅಂಗಡಿ ಇದಾಗಿದೆ. ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳನ್ನು ನಿಯಮಿತ ಮತ್ತು ಪಾರದರ್ಶಕವಾಗಿ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಡಾ.ಎಂ. ನಾರಾಯಣ್, ಮುಖಂಡರಾದ ಡಿ. ಮುನಿಯಲ್ಲಪ್ಪ, ಅಣ್ಣೋಜಿ, ಮಾಯಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಸತ್ಯೇಂದ್ರಕುಮಾರ್, ಪದಾಧಿಕಾರಿಗಳಾದ ಸಿ. ಚಿನ್ನಪ್ಪ, ಪ್ರದೀಪ್, ಶ್ರೀನಿವಾಸ್, ಬಿದರಗೆರೆ ಮೂರ್ತಿ, ಗೋಪಾಲ್, ರಾಘವೇಂದ್ರ, ಮುನಿಸ್ವಾಮಿ, ಗುಡ್ಡನಹಳ್ಳಿ ಮೂರ್ತಿ, ಮಾದೇಶ್, ಶಶಿಕಲಾ, ರೋಜಾ, ಸೇವಂತಮ್ಮ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.