ADVERTISEMENT

ದೇವನಹಳ್ಳಿ | ಹೈನುಗಾರಿಕೆ ಉತ್ತೇಜನಕ್ಕೆ ₹3 ಹೆಚ್ಚಳ: ಸಚಿವ ಕೆ.ಎಚ್‌.ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 7:00 IST
Last Updated 30 ಜುಲೈ 2023, 7:00 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಹಾಲು ಕ್ಯಾನ್‌ಗಳನ್ನು ರೈತರಿಗೆ ವಿತರಿಸಿದರು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಹಾಲು ಕ್ಯಾನ್‌ಗಳನ್ನು ರೈತರಿಗೆ ವಿತರಿಸಿದರು   

ದೇವನಹಳ್ಳಿ: ಆಗಸ್ಟ್‌ ಮೊದಲ ವಾರದಿಂದ ಹೈನುಗಾರಿಕೆಗೆ ಉತ್ತೇಜನ ನೀಡಲು ಪ್ರತಿ ಲೀಟರ್‌ ಹಾಲಿಗೆ ₹3 ಹೆಚ್ಚಳವಾಗಿ ನೀಡುತ್ತಿದ್ದು,  ಇದರಿಂದ ರೈತರಿಗೆ ಮತ್ತಷ್ಟು ಆರ್ಥಿಕ ಚೈತನ್ಯ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಐಬಸಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡ ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗುಣಮಟ್ಟದ ಹಾಲಿಗಾಗಿ ರಾಸುಗಳಿಗೆ ಉತ್ತಮ ಇಂಡಿ, ಬೂಸ ಅಗತ್ಯವಿದ್ದು, ಅವುಗಳ ಬೆಲೆ ಏರಿಕೆಯ ಕಾರಣದಿಂದಾಗಿ ಸಹಾಯ ಧನ ಹೆಚ್ಚಳ ಮಾಡಲಾಗಿದೆ. ಇಂತಹ ಉತ್ತೇಜನ ಯೋಜನೆಗಳಿಂದ ಮಾರುಕಟ್ಟೆಗೆ ಗುಣಮಟ್ಟದ ಹಾಲು ಸರಬರಾಜಾಗುವ ಮೂಲಕ, ಸಹಕಾರಿ ಸಂಘಗಳಿಗೂ ಅಧಿಕ ಲಾಭ ದೊರೆಯಲಿದೆ ಎಂದರು.

ADVERTISEMENT

ಮಕ್ಕಳ ಶಿಕ್ಷಣದ ಕುರಿತು ಪೋಷಕರು ಗಂಭೀರವಾಗಿ ಆಲೋಚಿಸಬೇಕಿದೆ. ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಬದಲಾವಣೆ ಮಾಡುವ ಆಶಯ ಹೊಂದಿದ್ದು, ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದರು.

ಬೆಮಲ್‌ ನಿರ್ದೇಶಕ ಶ್ರೀನಿವಾಸ ಮಾತನಾಡಿ, 2014ರಿಂದಲೂ ತಾಲ್ಲೂಕಿನ ಎಲ್ಲ ಹಾಲು ಸಹಕಾರಿ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ಹೈನುಗಾರರಿಗೆ ತಲುಪಿಸುವ ಮೂಲಕ ಇಂದು 67 ಸಹಕಾರಿ ಸಂಘಗಳು ತಮ್ಮ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡುತ್ತಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ರಾಜಣ್ಣ, ಗ್ರಾಪಂ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಲಕ್ಷ್ಮಿದೇವಿ, ಬಮೂಲ್‌ ಅಧಿಕಾರಿ ಡಿ.ಕೆ.ಮಂಜುನಾಥ್, ಸಂಘದ ಉಪಾಧ್ಯಕ್ಷ ದೇವರಾಜ್, ಜಿಕೆವಿಕೆಯ ಪ್ರಾಧ್ಯಾಪಕ ಸಿ.ನಾರಾಯಣಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.