
ಆನೇಕಲ್: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಜಿಗಣಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಲಾಗಿತ್ತು. ಶಿಬಿರದಲ್ಲಿ 500 ಮಂದಿ ಆರೋಗ್ಯ ತಪಾಸಣೆ ಮಾಡಲಾಯಿತು.
ಸಾಯಿವಿನೋದ್ ಚಾರಿಟಬಲ್ ಟ್ರಸ್ಟ್ ಮತ್ತು ಹೊಸಬೆಳಕು ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಶಿಬಿರದಲ್ಲಿ ಆಕ್ಸ್ಫರ್ಡ್ ಆಸ್ಪತ್ರೆ, ವಿಠಲ್ ಕಣ್ಣಿನ ಆಸ್ಪತ್ರೆ, ವೆಂಕಟೇಶ್ವರ ದಂತ ಮಹಾವಿದ್ಯಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳ ವೈದ್ಯರು ಪಾಲ್ಗೊಂಡಿದ್ದರು. ಬಹುತೇಕ ಮಹಿಳೆಯರು ಕ್ಸಾನ್ಸರ್ ಪರೀಕ್ಷೆ ಮಾಡಿಸಿಕೊಂಡರು.
ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ದಿಟ್ಟ ನಿರ್ಧಾರಗಳಿಗೆ ಹೆಸರಾಗಿದ್ದ ಉಕ್ಕಿನ ಮಹಿಳೆ ಎಂದು ಜಿಗಣಿ ಪುರಸಭಾ ಸದಸ್ಯ ವಿನೋದ್ ಶ್ಲಾಘಿಸಿದರು.
ಮೂರು ವರ್ಷಗಳಿಂದ ಇಂದಿರಾ ಗಾಂಧಿ ಜಯಂತಿಯಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಒತ್ತಡದ ಜೀವನ ಮತ್ತು ಜೀವನಶೈಲಿಯ ಬದಲಾವಣೆಯಿಂದಾಗಿ ಕಾಯಿಲೆ ಹೆಚ್ಚಾಗಿವೆ. ಹಾಗಾಗಿ ನಿಯಮಿತ ಆರೋಗ್ಯ ತಪಾಸಣೆ ಅವಶ್ಯ ಎಂದರು.
ಜಿಗಣಿ ಕೈಗಾರಿಕ ಪ್ರದೇಶವಾಗಿದ್ದು ಸಾವಿರಾರು ಮಂದಿ ಕಾರ್ಮಿಕರು ಈ ಭಾಗದಲ್ಲಿ ವಾಸವಾಗಿದ್ದಾರೆ. ಕಾರ್ಮಿಕರು ತಮ್ಮ ಕೆಲಸದ ನಡುವೆ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ನೀಡಲು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿರುವುದು ಎಂದು ಹೊಸಬೆಳಕು ಟ್ರಸ್ಟ್ನ ಎಂ.ರಾಮಕೃಷ್ಣ ಹೇಳಿದರು.
ಹಾರಗದ್ದೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್.ನಟರಾಜ್, ಜಿಗಣಿ ಪುರಸಭಾ ಅಧ್ಯಕ್ಷೆ ಅರುಣ ಕುಮಾರಿ ಪ್ರಹ್ಲಾದರೆಡ್ಡಿ, ಉಪಾಧ್ಯಕ್ಷೆ ಸವಿತಾ ಮುರಳಿ, ಸದಸ್ಯರಾದ ಆನಂದ್ ಗೌಡ, ಫ್ಯಾನ್ಸಿ ರಮೇಶ್, ಸಂಪಂಗಿ ರಾಮಯ್ಯ, ನಾಗಲೇಖ, ಮಂಜುನಾಥ್, ರಾಧ ವಿನೋದ್, ಮಧು, ನಾಗರಾಜ್, ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.