ADVERTISEMENT

ಓಬವ್ವ ಜಯಂತಿ ವಾರ್ಷಿಕ ಆಚರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:41 IST
Last Updated 12 ನವೆಂಬರ್ 2020, 6:41 IST
ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಚಲವಾದಿ ಮುಖಂಡರು ಉಪಸ್ಥಿತರಿದ್ದರು
ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಚಲವಾದಿ ಮುಖಂಡರು ಉಪಸ್ಥಿತರಿದ್ದರು   

ದೇವನಹಳ್ಳಿ: ‘ದಲಿತ ಇತಿಹಾಸಕಾರರನ್ನು ಸರ್ಕಾರ ನಿರ್ಲಕ್ಷಿಸಿವುದು ಸರಿಯಲ್ಲ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮುನಿನರಸಿಂಹಯ್ಯ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಚಲವಾದಿ ಮಹಾಸಭಾ ವತಿಯಿಂದ ನಡೆದ ವೀರ ವನಿತೆ ಒನಕೆ ಒಬವ್ವ ವಾರ್ಷಿಕ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.

‘ದಲಿತ ಸಮುದಾಯದ ಒಬ್ಬ ಸಾಮಾನ್ಯ ಮಹಿಳೆ ತನ್ನ ಒನಕೆಯಿಂದ ನೂರಾರು ಸೈನಿಕರನ್ನು ಕೊಂದು ಹೆಣದ ರಾಶಿ ಮಾಡಿದ್ದು ಸಾಮಾನ್ಯ ಸಾಧನೆಯಲ್ಲ. ತನ್ನ ಪತಿ ಕಹಳೆ ಚಲವಾದಿ ಮುದ್ದ ಹನುಪ್ಪರಿಗೆ ತಿಳಿಸದೆ ಏಕಾಂಗಿಯಾಗಿ ರಣರಂಗದಲ್ಲಿನ ಕದನದಂತೆ ಕಾದಾಡಿದ ವೀರ ಮಹಿಳೆ ಒನಕೆ ಓಬವ್ವ. ಅಂತಿಮ ಹಂತದಲ್ಲಿ ಹೈದರಾಲಿ ಸೈನಿಕರಿಗೆ ಬಲಿಯಾಗಿ ವೀರ ಸ್ವರ್ಗವನ್ನು ಪಡೆಯುತ್ತಾರೆ. ಅಂತಹ ಸಾಧನೆಗೈದ ಮಹಿಳೆ 18ನೇ ಶತಮಾನದವರು ಎಂಬುದನ್ನು ಸರ್ಕಾರ ಮನಗಂಡು ವಾರ್ಷಿಕ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಭಾರತ ಜನ ಜಾಗೃತಿ ಸೇನೆ ರಾಜ್ಯ ಘಟಕ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ‘ದಲಿತರು, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಸಮುದಾಯದಲ್ಲಿ ಇತಿಹಾಸಕಾರರ ಕೊರತೆ ಇಲ್ಲ. ಸಮುದಾಯಕ್ಕೆ ಇತಿಹಾಸಕಾರರ ಪರಿಚಯವಾಗಬೇಕು. ಮಹಿಳೆಯರನ್ನು ಮುಂಚೂಣಿಗೆ ತರಬೇಕು’ ಎಂದು ಹೇಳಿದರು.

ಚಲವಾದಿ ಮಹಾ ಸಭಾ ಜಿಲ್ಲಾ ಅಧ್ಯಕ್ಷ ರೆಡ್ಡಿಹಳ್ಳಿ ಮುನಿರಾಜು, ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ.ಸ್ವಾಮಿ ಮಾತನಾಡಿ, ‘ಜಯಂತಿ ಮೂರು ವರ್ಷಗಳಿಂದ ಸಮುದಾಯದ ವತಿಯಿಂದ ಆಚರಿಸಲಾಗುತ್ತಿದೆ. ಸ್ವಾಮಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಹುತಾತ್ಮರಾದ ಒನಕೆ ಓಬವ್ವ ಜಯಂತಿ ಸರ್ಕಾರಿಂದ ಆಚರಿಸುವಂತೆ ಮುಖಂಡರ ನಿಯೋಗದೊಂದಿಗೆ ಹೋಗಿ ಒತ್ತಾಯಿಸಲಾಗುತ್ತದೆ ಎಂದರು.

ಮುಖಂಡ ಕೆಂಪಣ್ಣ ಮತ್ತು ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಸಮುದಾಯ ಸಂಘಟಿತರಾಗಬೇಕು. ವೈಯಕ್ತಿಕ ಹಿತಾಸಕ್ತಿ ಬದಿಗೆ ಸರಿಸಿ ಒಗ್ಗೂಡಬೇಕು. ಜಿಲ್ಲಾಡಳಿತ ಭವನ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಜಿ.ಸುರೇಶ್, ಮುಖಂಡರಾದ ಡೇವಿಡ್ ನಾರಾಯಣ ಸ್ವಾಮಿ, ಸೋಮಶೇಖರ್, ಎಚ್.ಕೆ.ವೆಂಕಟೇಶಪ್ಪ, ಮುನಿರಾಜು, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.